ADVERTISEMENT

ಯಡ್ರಾಮಿ: ಹದಗೆಟ್ಟ ರಸ್ತೆಗಳು, ಪ್ರಯಾಣಿಕರು ಹೈರಾಣು

ತಾಲ್ಲೂಕು ಕೇಂದ್ರವಾಗಿ ಹಲವು ವರ್ಷ ಕಳೆದರೂ ಮೇಲ್ದರ್ಜೆಗೆ ಏರದ ಗ್ರಾಮ ರಸ್ತೆಗಳು

ಮಂಜುನಾಥ ದೊಡಮನಿ
Published 24 ಆಗಸ್ಟ್ 2024, 6:35 IST
Last Updated 24 ಆಗಸ್ಟ್ 2024, 6:35 IST
ಯಡ್ರಾಮಿ ತಾಲ್ಲೂಕಿನ ಮಾಗಣಗೇರಾ ರಸ್ತೆ ಹಾಳಾಗಿದೆ
ಯಡ್ರಾಮಿ ತಾಲ್ಲೂಕಿನ ಮಾಗಣಗೇರಾ ರಸ್ತೆ ಹಾಳಾಗಿದೆ   

ಯಡ್ರಾಮಿ: ಇಕ್ಕಟ್ಟಾದ ರಸ್ತೆಗಳು, ರಸ್ತೆಯುದ್ದಕ್ಕೂ ತಗ್ಗುಗುಂಡಿಗಳು, ರಸ್ತೆ ಸುಧಾರಣೆಗೆ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನದ ಜನ ಪ್ರತಿನಿಧಿಗಳು...

ತಾಲ್ಲೂಕಿನ ವಿವಿಧ ಗ್ರಾಮಗಳ ರಸ್ತೆಯ ದುಸ್ಥಿತಿ. ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಿಲ್ಲ. ರಸ್ತೆಗಳಲ್ಲಿ ತಗ್ಗುಗುಂಡಿ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಯಡ್ರಾಮಿ ತಾಲ್ಲೂಕು ಘೋಷಣೆಯಾಗಿ ಹಲವು ವರ್ಷಗಳೇ ಕಳೆದರೂ ಕ್ಷೇತ್ರದ ಶಾಸಕರು ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿಲ್ಲ. ಯತ್ನಾಳ, ಬಳಬಟ್ಟಿ, ಅಂಬರಖೇಡ, ಮಾಣಶಿವಣಗಿ, ಬಿಳವಾರ ಸೇರಿದಂತೆ ಬಹುತೇಕ ಗ್ರಾಮಗಳ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚಾರ ನಡೆಸುವಂತಾಗಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಯಡ್ರಾಮಿಯಿಂದ (ಹಂಗರಗಾ(ಕೆ) ಮಾರ್ಗವಾಗಿ ಶಿವಪುರ 15 ಕಿ.ಮೀ. ಯಡ್ರಾಮಿಯಿಂದ (ಕೋಣಸಿರಸಿಗಿ ಮಾರ್ಗವಾಗಿ) ಕುಕನೂರ 10 ಕಿ.ಮೀ ಸೇರಿದಂತೆ ತಾಲ್ಲೂಕಿನ ಬಹುತೇಕ ರಸ್ತೆಗಳು ಸರಿಯಾಗಿಲ್ಲ. ಜೇವರ್ಗಿಯಿಂದ ಯಡ್ರಾಮಿಗೆ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ರಸ್ತೆ ಕಿರಿದಾಗಿದ್ದರಿಂದ ಎದುರಿಗೆ ಬರುವ ವಾಹನಗಳಿಗೆ ಸೈಡ್ ಬಿಡಲೂ ಜಾಗವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನೂತನ ತಾಲ್ಲೂಕು ರಸ್ತೆ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ ರಸ್ತೆ ಅಭಿವೃದ್ಧಿಪಡಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

ರಾಜ್ಯ ಹೆದ್ದಾರಿ-157 ಶಿವುಪುರ ಕ್ರಾಸ್‍ನಿಂದ ಮಂಗಳೂರು ವಯಾ ಹಂಗರಗಾ (ಕೆ), ದುಮ್ಮದ್ರಿ, ಕಾಚಾಪುರ ರಸ್ತೆ. ರಾಜ್ಯ ಹೆದ್ದಾರಿ-156 ಕಾಖಂಟಕಿ ಕ್ರಾಸ್‍ನಿಂದ ಬಿಳವಾರ ರಸ್ತೆ ವಾಯ ಕಾಖಂಟಕಿ ನಂದಿಹಳ್ಳಿ, ಅಣಜಿಗಿ ರಸ್ತೆ ರಾಜ್ಯ 16 ನಾಗರಹಳ್ಳಿ ಕ್ರಾಸ್‍ನಿಂದ ತಾಲ್ಲೂಕು ಬೋರ್ಡ್ ರಸ್ತೆ ವಯಾ ಕುರಳಗೇರಾ ರಸ್ತೆ ಮೇಲ್ದರ್ಜೆಗೇರಿಸಲಾಗಿದೆ. ಶಿವಪುರ, ಕುಕನೂರ ರಸ್ತೆಗಳು ಸಂಪೂರ್ಣ ತಗ್ಗುಗುಂಡಿಗಳಿದ್ದು ಪೂರ್ಣ ಡಾಂಬರ್‌ ಕಂಡಿಲ್ಲ. ಉಳಿದ ಯಾವುದೇ ರಸ್ತೆಗಳು ಸುಸ್ಥಿತಿಯಲ್ಲಿ ಇಲ್ಲ.

ರಾಜಕೀಯ ನಾಯಕರು ಸಹ ತಲೆ ಕಡೆಸಿಕೊಳ್ಳುತ್ತಿಲ್ಲ. ಮುಂದಿನ ದಿನಮಾನಗಳಲ್ಲಿ ರಸ್ತೆ ಅಭಿವೃದ್ಧಿ ಪಡಿಸದಿದ್ದರೆ ಹೋರಾಟ ಮಾಡಲಾಗುವುದು
ಸಂಗಮೇಶ ಗಂಗಾಕರ್ ದಲಿತ ಸೇನೆ ಕರ್ನಾಟಕ ತಾಲ್ಲೂಕು ಘಟಕ ಅಧ್ಯಕ್ಷ
ರಸ್ತೆ ಮತ್ತು ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಶಾಲಾ-ಕಾಲೇಜು ಮಕ್ಕಳಿಗೆ ಕಷ್ಟವಾಗುತ್ತಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಇತ್ತ ಗಮನಹರಿಸಬೇಕು
ವಿಠ್ಠಲ್ ಚೌಡಕಿ ಮಾಣಶಿವಣಗಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.