ಕುಶಾಲನಗರ: ಸಮೀಪದ ಹಾರಂಗಿ ಗ್ರಾಮದ ರುದ್ರಭೂಮಿಗೆ ₹ 1.51 ಲಕ್ಷ ವೆಚ್ಚದ ನೂತನ ದೇಹ ದಹನ ಮಾಡುವ ಸಿಲಿಕಾನ್ ಚೇಂಬರ್ ಮಂಜೂರಾಗಿದ್ದು, ಧರ್ಮಸ್ಥಳ ಸಂಘದ ಯೋಜನಾ ಅಧಿಕಾರಿ ಲೋಹಿತ್ ಮಂಗಳವಾರ ಮಂಜೂರಾತಿ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ಗೆ ಹಸ್ತಾಂತರಿಸಿದರು.
ಚಿಕ್ಕತ್ತೂರು ಕಾರ್ಯಕ್ಷೇತ್ರದ ವತಿಯಿಂದ ಹಾರಂಗಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಸ್ಥಳ ಸಂಘದ ಯೋಜನೆ ಅಧಿಕಾರಿ ಲೋಹಿತ್, ‘ಡಿ.ವೀರೇಂದ್ರ ಹೆಗಡೆ ಅವರ ಸೂಚನೆಯಂತೆ ಕೊಡಗು ಜಿಲ್ಲೆಯಲ್ಲಿ ಸಮುದಾಯ ಭವನ, ಶಾಲೆಗಳ ದುರಸ್ತಿ ಕಾರ್ಯ, ಕೆರೆಗಳ ಅಭಿವೃದ್ಧಿ ಹಾಗೂ ಮೃತಪಟ್ಟವರ ಕುಟುಂಬದವರಿಗೆ ಧನಸಹಾಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಅದೇ ರೀತಿ ಹಾರಂಗಿ ಹುಲುಗುಂದ ಗ್ರಾಮದ ಹಿಂದೂ ರುದ್ರಭೂಮಿಗೆ ದೇಹ ದಹನ ಮಾಡುವ ಸಿಲಿಕಾನ್ ಚೇಂಬರ್ ಮಂಜೂರುಗೊಂಡಿದೆ’ ಎಂದು ಹೇಳಿದರು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ‘ಹಾರಂಗಿ ಹುಲುಗುಂದ ಗ್ರಾಮದ ಹಿಂದೂ ರುದ್ರಭೂಮಿಗೆ ದೇಹ ದಹನ ಸಿಲಿಕಾನ್ ಚೇಂಬರ್ ಅಗತ್ಯವಿತ್ತು. ಮಳೆಗಾಲದ ಸಂದರ್ಭದಲ್ಲಿ ರುದ್ರಭೂಮಿಯಲ್ಲಿ ದೇಹ ದಹನ ಕಾರ್ಯ ತುಂಬಾ ಕಷ್ಟಕರವಾಗಿತ್ತು. ಹಾಗಾಗಿ ಗ್ರಾಮ ಪಂಚಾಯಿತಿಯ ಅನುದಾನದಿಂದ ಎರಡು ಹಂತದಲ್ಲಿ ಸುಮಾರು ₹ 5 ಲಕ್ಷ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ದೇಹದಹನ ಸಿಲಿಕಾನ್ ಚೇಂಬರ್ ಅವಶ್ಯಕತೆ ಇರುವ ಬಗ್ಗೆ ಧರ್ಮಸ್ಥಳ ಸಂಘದ ಯೋಜನೆ ಅಧಿಕಾರಿ ಅವರಿಗೆ ಮನವಿ ಮಾಡಲಾಯಿತು. ಈಗ ಅನುಮೋದನೆಯಾಗಿರುವುದು ಅನುಕೂಲವಾಗಿದೆ’ ಎಂದರು.
ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮಣಿಕಂಠ, ಧರ್ಮಸ್ಥಳ ಸಂಘದ ಮೇಲ್ವಿಚಾರಕರಾದ ಯತೀಶ್, ಸೇವಾ ಪ್ರತಿನಿಧಿ ಸಂಗೀತ ದಿನೇಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಲೋಹಿತ್ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.