ಮಡಿಕೇರಿ: ಅಮ್ಮತ್ತಿ ಒಂಟಿಯಂಗಡಿಯ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023–24ನೇ ಸಾಲಿನಲ್ಲಿ ₹ 12.12 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ ಸುಬ್ಬಯ್ಯ ಹೇಳಿದರು.
ಸಂಘದ ನೂತನ ಸಭಾಂಗಣದಲ್ಲಿ ಶುಕ್ರವಾರ ನಡೆದ 43ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸದಸ್ಯರಿಗೆ ಶೇ 7ರಷ್ಟು ಡಿವಿಡೆಂಡ್ ನೀಡಲಾಗುವುದು, ನಿರಖು ಠೇವಣಿಗೆ ಶೇ 7 ಹಾಗೂ ಹಿರಿಯ ನಾಗರಿಕರಿಗೆ ಶೇ .50 ಹೆಚ್ಚುವರು ಬಡ್ಡಿ ನೀಡಲಾಗುತ್ತಿದೆ ಎಂದರು.
ಸಂಘದಲ್ಲಿ ಒಟ್ಟು 1,485 ಸದಸ್ಯರಿದ್ದು, ಪಾಲುಬಂಡವಾಳ ₹ 87 ಲಕ್ಷ ಇದೆ. ಕೆಸಿಸಿ ಕೃಷಿ ಸಾಲ, ಸ್ವಸಹಾಯ, ಗುಂಪು ಸಾಲ, ವ್ಯಾಪಾರ, ಜಾಮೀನು, ಆಭರಣ, ಜಂಟಿ ಬಾಧ್ಯತಾ ಗುಂಪು ಸಾಲ, ನಿತ್ಯನಿಧಿ ಠೇವಣಿ ಸಾಲ, ನಿರಖು ಠೇವಣಿ ಸಾಲ ಹಾಗೂ ಸಂಬಳಾಧರಿತ ಸಾಲ ಸೇರಿ ಒಟ್ಟು ₹ 1024.39 ಲಕ್ಷ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
‘ಸದಸ್ಯರು ಸಂಘದಲ್ಲಿ ವ್ಯವಹರಿಸುವ ಮೂಲಕ ತಮ್ಮಲ್ಲಿರುವ ಹಣವನ್ನು ಸಂಘದಲ್ಲಿ ಠೇವಣಿ ಇಡುವ ಮೂಲಕ ಸಂಘಕ್ಕೆ ಬಂಡವಾಳ ಕ್ರೋಢೀಕರಿಸಲು ಮತ್ತು ಸದಸ್ಯರು ಸಂಘದಲ್ಲೇ ಮಾರಾಟ ಮಾಡುತ್ತಿರುವ ರಸಗೊಬ್ಬರ, ಹತ್ಯಾರು ಮೊದಲಾದವುಗಳನ್ನು ನಮ್ಮಲ್ಲಿಯೇ ಖರೀದಿಸಿ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ವಿ.ಆರ್.ಹರೀಶ್, ನಿರ್ದೇಶಕರಾದ ವಿ.ಆರ್.ಪ್ರಭಾವತಿ, ಬೊಪ್ಪಂಡ ಪಿ ಗಣಪತಿ, ಅಪ್ಪಾರಂಡ ಎಂ. ಕಾರ್ಯಪ್ಪ, ಕೊಪ್ಪಡ ಎಂ ಗಣೇಶ, ಕೆ.ಎಸ್.ದಿನೇಶ್, ಜಿಲ್ಲಂಡ ಸಿ ಉತ್ತಪ್ಪ, ಪಿ.ಎ.ಮಂಜುನಾಥ, ಪೊರ್ಕೊಂಡ ಸವಿತಾ ಬೋಪಣ್ಣ, ಮೇಲ್ವಿಚಾರಕ ಟಿ.ಟಿ.ಗಣಪತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾತಂಡ ಡಿ ಭೀಮಯ್ಯ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.