ಸೋಮವಾರಪೇಟೆ: ತಾಲ್ಲೂಕಿನ ಶಾಂತಳ್ಳಿ ಹೋಬಳಿ ಬೆಟ್ಟದಳ್ಳಿ ಭಾಗದಲ್ಲಿ ಮಾನ್ಸೂನ್ ಮಡ್ವೆಂಚರ್ ಡ್ರೈವ್-2024 ಮಡ್ವೆಂಚರ್ ಡ್ರೈವ್ ರ್ಯಾಲಿ ಪರಿಸರವಾದಿಗಳ ವಿರೋಧದ ನಡುವೆಯೂ ಶನಿವಾರ ಯಶಸ್ವಿಯಾಗಿ ನಡೆಯಿತು.
ರಾಜ್ಯ, ನೆರೆಯ ಕೇರಳ, ತಮಿಳುನಾಡಿನಿಂದಲೂ ಆಗಮಿಸಿದ್ದ ಜೀಪ್ಗಳು ಕೆಸರುಮಯ ರಸ್ತೆಯಲ್ಲಿ ಸಾಗಿ ಸಾಹಸಮಯ ಚಾಲನೆ ಸವಾಲನ್ನು ಸಮರ್ಥವಾಗಿ ಎದುರಿಸಿದವು. ಇದಕ್ಕೂ ಮುನ್ನ ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯದ ಮುಂಭಾಗ ಡ್ರೈವ್ಗೆ ಬಿಜೆಪಿ ಪ್ರಮುಖ ಎಸ್.ಜಿ. ಮೇದಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿ, ‘ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಯೋಜನೆಗಳ ಅಗತ್ಯವಿದೆ. ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮದಿಂದ ಅಭಿವೃದ್ಧಿ ನಿರೀಕ್ಷಿಸಬಹುದು’ ಎಂದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ‘ಗ್ರಾಮೀಣ ಭಾಗದ ರೈತರು ತಮ್ಮ ತೋಟ, ಗದ್ದೆಗಳಿಗೆ ತೆರಳಲು ರಸ್ತೆಯ ಸಮಸ್ಯೆ ಇದ್ದು, ಇಂತಹ ಸಾಹಸಮಯ ಚಾಲನೆಗಾಗಿ ರಸ್ತೆ ನಿರ್ಮಿಸುವುದರಿಂದ ಸ್ಥಳೀಯರಿಗೂ ಅನುಕೂಲವಾಗುತ್ತದೆ’ ಎಂದರು.
ಡ್ರೈವ್ನಲ್ಲಿ 80ಕ್ಕೂ ಅಧಿಕ ವಾಹನಗಳು ಭಾಗಿಯಾಗಿದ್ದವು. ಹಲವು ವಾಹನಗಳು ಕೆಸರಿನ ಹೊಂಡಗಳಲ್ಲಿ ಸಿಲುಕಿಕೊಂಡ ಸಂದರ್ಭ ಟ್ರ್ಯಾಕ್ಟರ್ಗಳ ಮೂಲಕ ಹೊರಗೆಳೆದು ಆಯೋಜಕರು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಭಾಗದ ಅರಣ್ಯ ಇಲಾಖೆಗೆ ಸೇರಿದ ಸ್ಥಳದ ಮೂಲಕ ಹಾದುಹೋಗಿದ್ದ ರಸ್ತೆಯಲ್ಲಿ ಸಾಹಸಮಯ ಚಾಲನೆಗೆ ಅರಣ್ಯಾಧಿಕಾರಿಗಳು ತಡೆಯೊಡ್ಡಿದರು. ಎರಡೂ ಬದಿಯಲ್ಲಿ ಸ್ಥಳೀಯರ ತೋಟ, ನಡುವೆ ಅರಣ್ಯ ಇಲಾಖೆಗೆ ಸೇರಿದ ಜಾಗವಿದ್ದ ಸ್ಥಳಗಳಲ್ಲಿ ಚಾಲನೆಗೆ ಅವಕಾಶ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.