ವಿರಾಜಪೇಟೆ: ‘ವಾಹನ ಸವಾರರು ಕಡ್ಡಾಯವಾಗಿ ನಿಯಮವನ್ನು ಪಾಲಿಸುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬೇಕು’ ಎಂದು ಡಿ.ವೈ.ಎಸ್.ಪಿ ಮೋಹನ್ ಕುಮಾರ್ ಹೇಳಿದರು.
ಪಟ್ಟಣದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ರಸ್ತೆ ಸಂಚಾರ ಸುರಕ್ಷಾ ನಿಯಮದ ಬಗೆಗಿನ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ವಾಹನವನ್ನು ಚಾಲನೆ ಮಾಡುವಾಗ ಚಾಲಕರು ಮೊಬೈಲ್ ಪೋನ್ ಬಳಸಬಾರದು. ಇದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ರಕ್ಷಣೆಗಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ರಸ್ತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.
ಸಿ.ಪಿ.ಐ ಶಿವರುದ್ರ ಮಾತನಾಡಿ, ‘ವಾಹನಗಳ ಚಾಲನೆ ಸಂದರ್ಭ ವಾಹನದ ದಾಖಲೆಗಳನ್ನು ಹೊಂದಿರಬೇಕು. ಸೀಟ್ ಬೆಲ್ಟ್ ಬಳಕೆಯಿಂದ ಅಪಘಾತದಿಂದಾಗುವ ಗಾಯಾಳುಗಳ ತೀವ್ರತೆ ಶೇ 75ರಷ್ಟು ಕಡಿಮೆಯಾಗಲಿದೆ. ವೇಗದ ಚಾಲನೆಗೆ ಕಡಿವಾಣ ಹಾಕಿ ತಮ್ಮ ಇತಿಮಿತಿಯಲ್ಲಿ ವಾಹನವನ್ನು ಚಲಾಯಿಸಬೇಕು. ಕೆಲವು ಸಂದರ್ಭ ತಮ್ಮದಲ್ಲದ ತಪ್ಪಿಗೆ ಅಮಾಯಕರು ಬಲಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ವಾಹನ ಸವಾರರು ಸೇರಿದಂತೆ ಪಾದಚಾರಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು’ ಎಂದರು.
ಪಿ.ಎಸ್.ಐ ರವೀಂದ್ರ ಮಾತನಾಡಿ, ವಾಹನ ಅಪಘಾತಗಳಿಗೆ ಕಾರಣವಾಗುವ ಅಂಶಗಳಿಗೆ ಬೆಳಕು ಚೆಲ್ಲುವ ಮೂಲಕ ಜಾಗೃತಿ ಮೂಡಿಸುವ ದೃಷ್ಟಿಯಿಂದ ಕೆಲ ವಿಡಿಯೊ ತುಣುಕುಗಳನ್ನು ಪ್ರದರ್ಶಿಸಿಸಿದರು.
ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲ ಮದುಲೈ ಮುತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.