ADVERTISEMENT

ಕುಶಾಲನಗರ | ಕಣ್ಮನ ಸೆಳೆವ ಅರ್ಧಚಂದ್ರಾಕೃತಿ ಚಿಕ್ಲಿಹೊಳೆ

ಚಿಕ್ಲಿಹೊಳೆ ಜಲಾಶಯ ಭರ್ತಿ : ರೈತರಲ್ಲಿ ಸಂತಸ, ನಾಲೆ ಹೂಳೆತ್ತಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 0:58 IST
Last Updated 3 ಜುಲೈ 2024, 0:58 IST
ಕುಶಾಲನಗರ ಸಮೀಪದ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಜಲಾಶಯ ಮಂಗಳವಾರ ಭರ್ತಿಯಾಗಿದ್ದು,ಜಲಾಶಯದ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿರುವ ನಯನ ಮನೋಹರ ದೃಶ್ಯ.
ಕುಶಾಲನಗರ ಸಮೀಪದ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಜಲಾಶಯ ಮಂಗಳವಾರ ಭರ್ತಿಯಾಗಿದ್ದು,ಜಲಾಶಯದ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿರುವ ನಯನ ಮನೋಹರ ದೃಶ್ಯ.   

ಕುಶಾಲನಗರ: ಕೊಡಗು ಜಿಲ್ಲೆಯ ನಂಜರಾಯಪಟ್ಟಣ ಪಂಚಾಯತಿ ವ್ಯಾಪ್ತಿಯ ರಂಗಸಮುದ್ರ ಬಳಿ ‘ನಯಾ‌ಗರ ಫಾಲ್ಸ್’ ಎಂದೇ ಖ್ಯಾತಿ ಪಡೆದ ಚಿಕ್ಲಿಹೊಳೆ ಜಲಾಶಯ ಮಂಗಳವಾರ ಭರ್ತಿಯಾಗಿದೆ. ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿರುವ ನಯನಮನೋಹರ ದೃಶ್ಯ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.

 ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳ ಪೈಕಿ ಅತೀ ಚಿಕ್ಕದಾದ ಈ ಜಲಾಶಯ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೈತುಂಬಿದೆ. ಇದರಿಂದ ಹೆಚ್ಚುವರಿ ನೀರು ಜಲಾಶಯದ ಅರ್ಧ ಚಂದ್ರಾಕೃತಿಯ ತಡೆಗೋಡೆ ಮೇಲಿಂದ ಹಾಲು ನೊರೆಯಂತೆ ಹರಿಯುತ್ತಿರುವುದು ಕಣ್ಮನ ಸೆಳೆಯುತ್ತಿದೆ.

ಯಾವುದೇ ಕ್ರಸ್ಟ್‌ಗೇಟ್‌ ಹೊಂದಿರದೆ ಕೇವಲ ಬಾವಿಯಾಕಾರದ ಮಾದರಿಯಲ್ಲಿ ಏಕೈಕ ದೊಡ್ಡ ತೂಬು ನಿರ್ಮಿಸಲಾಗಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾದಂತೆ ತನ್ನಿಂತಾನೆ ಅಣೆಕಟ್ಟೆಯ ಹೊರಗೆ ಬೀಳುತ್ತದೆ.

ADVERTISEMENT

ಗರಿಷ್ಠ 72.6 ಮೀಟರ್ ಎತ್ತರ ಹೊಂದಿರುವ ಅಣೆಕಟ್ಟಿನಲ್ಲಿ 0.18 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.  
ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದ ಮಧ್ಯೆ ಸದಾ ಹಸಿರಿನಿಂದ ಕಂಗೊಳಿಸುವ ಸುಂದರ ಪರಿಸರದಲ್ಲಿ ಈ ಜಲಾಶಯ ರೂಪುಗೊಂಡಿದೆ. ಜಲಾಶಯದ ಹಿನ್ನೀರು ಪ್ರದೇಶ ಒಂದೆಡೆ ದಟ್ಟ ಕಾಡು ಹಾಗೂ ಮತ್ತೊಂದೆಡೆ ಕಾಫಿ ತೋಟಗಳ ಸಾಲಿನಿಂದ ಆವೃತಗೊಂಡಿದೆ.

ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶ: ಕೊಡಗಿನಲ್ಲಿ ಪ್ರವಾಸಿಗರ ವೀಕ್ಷಣೆಗೆ ಹತ್ತಾರು ತಾಣಗಳಿದ್ದು, ಅವುಗಳ ಪೈಕಿ  ಈ ಜಲಾಶಯ ಒಂದಾಗಿದೆ. ಇತರೆ ಜಲಾಶಯಗಳೊಂದಿಗೆ ಹೋಲಿಕೆ ಮಾಡುವಷ್ಟು ಈ ಜಲಾಶಯ ದೊಡ್ಡದಾಗಿಲ್ಲ. ಈ ಜಲಾಶಯ ಅಭಿವೃದ್ಧಿಪಡಿಸಿದಲ್ಲಿ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ ಎಂಬುದು ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರ ಅಭಿಪ್ರಾಯ.

ರೈತರಲ್ಲಿ ಹರ್ಷ: ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಂತಸಗೊಂಡಿದ್ದಾರೆ. ಹೆಚ್ಚುವರಿ ನೀರು ತಡೆಗೋಡೆ ಮೇಲಿಂದ ಹೊರ ಹರಿಯುತ್ತಿದೆ. ಆದರೆ, ಜುಲೈ ಆರಂಭವಾದರೂ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಲ್ಲಿ ಹೂಳು ತೆಗೆಯದ ಬಗ್ಗೆ ರೈತರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಎಂಜಿನಿಯರ್ ಕಿರಣ್ ಕುಮಾರ್ ಅವರು ಈಗಾಗಲೇ ನಾಲೆಗಳ ಹೂಳೆತ್ತಲು ಟೆಂಡರ್ ಕರೆಯಲಾಗುತ್ತದೆ. ಮುಂದಿನಗಳ ದಿನಗಳಲ್ಲಿ ಹೂಳು ತೆಗೆದು ರೈತರ ಕೃಷಿ ಚಟುವಟಿಕೆಗೆ ನೀರು ಪೂರೈಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕುಶಾಲನಗರ ಸಮೀಪದ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಜಲಾಶಯ ಮಂಗಳವಾರ ಭರ್ತಿಯಾಗಿದ್ದುಜಲಾಶಯದ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿರುವ ನಯನ ಮನೋಹರ ದೃಶ್ಯ.
ಕುಶಾಲನಗರ ಸಮೀಪದ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಜಲಾಶಯ ಮಂಗಳವಾರ ಭರ್ತಿಯಾಗಿರುವ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.