ಮಡಿಕೇರಿ: ನಗರದ ದಾಸವಾಳ ರಸ್ತೆಯ ವೀರಭದ್ರ ಮುನೇಶ್ವರ ದೇವಾಲಯ ಬಳಿ ‘ಮಡಿಕಟ್ಟೆ’ ನಿರ್ಮಿಸುವ ಕುರಿತು ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಭರವಸೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿವಾಳರ ಅಭಿವೃದ್ಧಿ ಸಂಘದಿಂದ ಇಲ್ಲಿನ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಡಿವಾಳ ಸಮಾಜದವರು ‘ಕಾಯಕವೇ ಕೈಲಾಸ’ ಎಂಬಂತೆ ಕಾಯಕ ವೃತ್ತಿ ಮೂಲಕ ಸಮಾಜದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ಅವರು ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಬೇಕು’ ಎಂದು ಸಲಹೆ ನೀಡಿದರು.
‘ಮಹಿಳೆಯರು, ವೃತ್ತಿನಿರತ ಶ್ರಮ ಜೀವಿಗಳು, ಬಡವರು ಮೇಲೆ ಬರಬೇಕು. ಎಲ್ಲರಿಗೂ ‘ಸಮಬಾಳು-ಸಮಪಾಲು’ ಎಂಬ ಶರಣರ ಸಂದೇಶವನ್ನು ಸಮಾಜದಲ್ಲಿ ಹೇಳಿದವರಲ್ಲಿ ಮಡಿವಾಳ ಮಾಚಿದೇವ ಅವರೂ ಒಬ್ಬರು’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಕೊಳಕನ್ನು ಹೋಗಲಾಡಿಸಿ ಸ್ವಚ್ಛತೆಯಿಂದ ತಾರತಮ್ಯ ಇಲ್ಲದ ಸಮಾಜ ನಿರ್ಮಾಣ ಮಾಡುವ ಗುರಿ ಶರಣ ಮಡಿವಾಳ ಮಾಚಿದೇವರ ಬದುಕಾಗಿತ್ತು’ ಎಂದರು.
12ನೇ ಶತಮಾನದಲ್ಲಿ ಕ್ರಾಂತಿಕಾರಕ ಹೋರಾಟ ನಡೆಸಿ ಶರಣರ ವಚನಗಳನ್ನು ಜನರಲ್ಲಿ ಬಿತ್ತಲು ಪ್ರಯತ್ನಿಸಿದರು ಎಂದು ಅವರು ಹೇಳಿದರು.
‘ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಹಿಪ್ಪರಗಿಯ ಪರುತಯ್ಯ ಮತ್ತು ಸುಜ್ಞಾನವ್ವ ದಂಪತಿಗಳ ಪುತ್ರನಾಗಿ ರತ್ನ-ಶರಣ ಕಿರಣ ಮಡಿವಾಳ ಮಾಚಿದೇವರು ಜನಿಸಿದರು. ಅವರು ಹುಟ್ಟಿನಿಂದ ಮಡಿವಾಳರಾಗಿದ್ದರೂ, ಅಚಲ ಕಾಯಕ ನಿಷ್ಠರಾಗಿದ್ದರು’ ಎಂದರು.
‘ಭಾರತದ ಇತಿಹಾಸದಲ್ಲಿ ಸಂಸತ್ ಭವನ ಮೊದಲು ಅಸ್ತಿತ್ವಕ್ಕೆ ಬಂದದ್ದು ಬಸವ ಕಲ್ಯಾಣದಲ್ಲಿ. ಅನುಭವ ಮಂಟಪ ಕಟ್ಟುವಲ್ಲಿ ಶರಣರೊಂದಿಗೆ ಮಡಿವಾಳ ಮಾಚಿದೇವರು ಶಕ್ತಿ ಮೀರಿ ದುಡಿದಿದ್ದಾರೆ’ ಎಂದು ವಿವರಿಸಿದರು.
ರಾಜ್ಯದಲ್ಲಿ ಮಡಿವಾಳ ಸಮಾಜವು 8 ಲಕ್ಷ ಜನಸಂಖ್ಯೆ ಹೊಂದಿದ್ದು, ಹಿಂದುಳಿದ ವರ್ಗವಾಗಿದೆ. ಆ ದಿಸೆಯಲ್ಲಿ ಸರ್ಕಾರದ ಹಲವು ಸವಲತ್ತುಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.
ಹಿರಿಯ ಮುಖಂಡರಾದ ಸುಬ್ರಹ್ಮಣ್ಯ, ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ದೀಪಿಕಾ ಸಂದೀಪ್, ಜ್ಯೋತಿ, ಕಾರ್ತಿಕ್ ಭಾಗವಹಿಸಿದ್ದರು.
ವೀರಭದ್ರ ಮುನೇಶ್ವರ ದೇವಾಲಯ ಬಳಿ ಈ ಹಿಂದೆ ನಗರಸಭೆಯಿಂದ ಸೇತುವೆ ನಿರ್ಮಿಸಲಾಗಿದೆ. ಅದೇ ರೀತಿ ಈ ಬಾರಿ ಮಡಿಕಟ್ಟೆ ನಿರ್ಮಿಸಬೇಕು.ಪಿ.ಜಿ.ಸುಕುಮಾರ್ ಮಡಿವಾಳರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.