ಸೋಮವಾರಪೇಟೆ: ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಭಾನುವಾರ ಶಾಸಕರ ಗೃಹ ಕಚೇರಿಯಲ್ಲಿ ಡಾ.ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರಪೇಟೆಯಿಂದ ಕೂತಿ ಮಾರ್ಗದ ರಸ್ತೆಯ ಅಗಲೀಕರಣ, ಸಿ ಮತ್ತು ಡಿ ಜಾಗದ ಸಮಸ್ಯೆ, ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸಲು ಯಡೂರಿನಿಂದ ಪ್ರತ್ಯೇಕ ಫೀಡರ್ ಅಳವಡಿಸಿ, ರಾಮನಾಥಪುರದಿಂದ ಸೋಮವಾರಪೇಟೆ, ಕೂತಿ, ವಣಗೂರು ಕೂಡುರಸ್ತೆ, ಸುಬ್ರಹ್ಮಣ್ಯ ಮಾರ್ಗದಲ್ಲಿ ನೂತನ ಬಸ್ ಸೇವೆ ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಕೂಡಲೇ ಪರಿಹರಿಸಿಕೊಡಬೇಕು ಎಂದು ಕೋರಿದರು.
ಶಾಸಕ ಡಾ.ಮಂತರ್ ಗೌಡ ಪ್ರತಿಕ್ರಿಯಿಸಿ, ‘ಸೋಮವಾರಪೇಟೆ-ಕೂತಿ- ಗಡಿಕಲ್ಲುವರೆಗಿನ ರಸ್ತೆ ಅಭಿವೃದ್ಧಿಗೆ ಈಗಾಗಲೇ ₹20 ಕೋಟಿ ಅನುದಾನ ಬಿಡುಗಡೆಯಾಗಿದೆ. ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಾಗುವುದು’ ಎಂದು ಭರವಸೆ ನೀಡಿದರು.
‘ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಬಹೆಗರಿಸಲು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಫಾರಂ ನಂಬರ್ 53 ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಮಿತಿ ರಚನೆಯಾದ ತಕ್ಷಣ ವಿಲೇವಾರಿ ಮಾಡಲಾಗುವುದು. ಬಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಸಮಸ್ಯೆ ನಿವಾರಣೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ’ ತಿಳಿಸಿದರು.
ಪ್ರಮುಖರಾದ ಐ.ಎಚ್.ನಿಂಗಪ್ಪ, ಬಸವರಾಜ್, ಎಡದಂಟೆ ಲವ, ಕೂತಿ ಗ್ರಾಮಾಧ್ಯಕ್ಷ ಎಚ್.ಎಂ.ಜಯರಾಮ್, ಎಚ್.ಡಿ.ಮೋಹನ್, ಕೆ.ಟಿ.ಜೋಯಪ್ಪ, ಸುರೇಶ್ ಚಕ್ರವರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.