ಮಡಿಕೇರಿ: ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು 50ನೇ ವರ್ಷದ ಜನ್ಮದಿನವನ್ನು ಮಂಗಳವಾರ ಆಚರಿಸಿಕೊಂಡರು. ಇದರ ನಿಮಿತ್ತ ಅವರ ಬೆಂಬಲಿಗರು ಜಿಲ್ಲೆಯಾದ್ಯಂತ ವಿವಿಧ ಸೇವಾ ಕಾರ್ಯಗಳನ್ನು ನಡೆಸಿದರು.
ಬೆಳಿಗ್ಗೆಯೇ ಪೊನ್ನಣ್ಣ ಹಾಗೂ ಅವರ ಕುಟುಂಬದವರು ತಲಕಾವೇರಿ ಹಾಗೂ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸುಬ್ರಮಣ್ಯ ದೇವರಲ್ಲಿ ಪ್ರಾರ್ಥಿಸಿ ಕಲ್ಲುಸಕ್ಕರೆಯ ತುಲಾಭಾರ ನೆರವೇರಿಸಿದರು.
ಅರ್ಚಕರಾದ ಹರೀಶ್ ಭಟ್ ವಿಶೇಷ ಪೂಜೆ ಕಾರ್ಯ ನೆರವೇರಿಸಿದರು. ಈ ವೇಳೆ ತಕ್ಕ ಮುಖ್ಯಸ್ಥರಾದ ಬೊಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ದೇವಾಲಯ ಸಮಿತಿ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ದೇವಂಗೋಡಿ ಹರ್ಷ, ನೆರವಂಡ ಉಮೇಶ್, ಇಸ್ಮಾಯಿಲ್, ಕರಿಕೆ ರಾಮನಾಥ್, ಲವಚಿಣ್ಣಪ್ಪ ಭಾಗವಹಿಸಿದ್ದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎ.ಎಸ್.ಪೊನ್ನಣ್ಣ, ‘ನಾಡಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ಎಲ್ಲರಲ್ಲಿ ಸಂತಸ, ಸಮೃದ್ಧಿ ತರುವಂತಾಗಲಿ’ ಎಂದು ಪ್ರಾರ್ಥಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಮನೆ, ರಸ್ತೆ, ಸೇತುವೆ ಹಾನಿ ಬಗ್ಗೆ ಮುಖ್ಯಮಂತ್ರಿ ಅವರು, ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಲ್ಲಿ ಗಮನ ಸೆಳೆಯಲಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದರು.
ಕಾಡಾನೆ ಮತ್ತು ಮಾನವ ಸಂಘರ್ಷ ತಪ್ಪಿಸುವಲ್ಲಿ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಆ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್ಗಳ ನಿರ್ಮಾಣ ಮಾಡಲಾಗುವುದು. ರ್ಯಾಪಿಡ್ ರೆಸ್ಪಾನ್ಸ್ ತಂಡವನ್ನು ಮತ್ತಷ್ಟು ಬಲಪಡಿಸಲಾಗುವುದು, ಈ ಸಂಬಂಧ ಅರಣ್ಯ ಸಚಿವರ ಜತೆಗೂ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜನ್ಮದಿನ ಪ್ರಯುಕ್ತ ಅಭಿಮಾನಿಗಳು ವಿವಿಧ ಕಾರ್ಯಕ್ರಮ ಆಯೋಜಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ 59 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ, ಗೋಣಿಕೊಪ್ಪದ ಕೀರೆಹೋಳೆ ಬದಿ ಗಿಡ ನೇಡುವ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಬಳಿಕ ಭಾಗಮಂಡಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳ ಜೊತೆಗೂಡಿ ಕೇಕ್ ವಿತರಿಸುವ ಮೂಲಕ ಜನ್ಮ ದಿನ ಆಚರಿಸಿಕೊಂಡರು. ನಂತರ, ಭಾಗಮಂಡಲದ ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
‘ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಪೊನ್ನಣ್ಣ’
ವಿರಾಜಪೇಟೆ: ಶಾಸಕ ಎ.ಎಸ್.ಪೊನ್ನಣ್ಣ ಅವರು ತನ್ನ ಕರ್ತವ್ಯವನ್ನು ಜನತೆಯ ಸಮಸ್ಯೆಗಳಿಗೆ ಸ್ವಂದಿಸುವುದು ಸೇರಿದಂತೆ ಕೊಡಗಿನ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅಭಿಪ್ರಾಯಪಟ್ಟರು. ಸಮೀಪದ ಬಿಟ್ಟಂಗಾಲದ ಕೂರ್ಗ್ ಎಥ್ನಿಕ್ ಸಭಾಂಗಣದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೊನ್ನಣ್ಣ ಮಾತನಾಡಿ ‘ಕೊಡಗನ್ನು ಕೊಡಗಿನ ನೆಲ-ಜಲವನ್ನು ಉಳಿಸಲು ಕೆಲವರ ಮುಖವಾಡ ಕಳಚಬೇಕಾಗುತ್ತದೆ. ಅಭಿವೃದ್ದಿಯ ಹೆಸರಿನಲ್ಲಿ ಸ್ವಾರ್ಥಕ್ಕಾಗಿ ಕೆಲವರು ಕೊಡಗಿನ ಕಾಡು ಸೇರಿದಂತೆ ಪರಿಸರವನ್ನು ನಾಶ ಮಾಡಿದ್ದಾರೆ. ಕೊಡಗನ್ನು ಉಳಿಸಲು ಸಂಘ ಸಂಸ್ಥೆಗಳ ಜೊತೆ ಕೈಜೋಡಿಸುತ್ತೇನೆ. ಇಂದು ಆರಂಭಿಸಿರುವ ಸ್ವಚ್ಛತಾ ಅಭಿಯಾನ ಆಂದೋಲನವಾಗಿ ಬೆಳೆದು ರಾಜ್ಯ- ದೇಶಕ್ಕೆ ಮಾದರಿಯಾಗಬೇಕು’ ಎಂದರು. ಹಿರಿಯ ವಕೀಲ ಮೇರಿಯಂಡ ಪೂವಯ್ಯ ‘ವಾಗ್ದಾನ ಅನುಷ್ಠಾನ’ ಎಂಬ ಪೊನ್ನಣ್ಣ ಅವರ ಪುಸ್ತಕವನ್ನು ಬಿಡುಗಡೆ ಮಾಡಿದರು. ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಗಳು ನಡೆದವು. ಧರ್ಮಗುರುಗಳಾದ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಜೇಮ್ಸ್ ಡೋಮೆನಿಕ್ ಎಂ.ಎಂ ಅಬ್ದುಲ ಪೈಜು ಎಡಪಾಲ ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಹಫೀಲ್ ಸಹದಿ ಹಾಗೂ ಹಿರಿಯ ವಕೀಲ ಮೇರಿಯಂಡ ಪೂವಯ್ಯ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅರೆ ಭಾಷೆ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ್ಮಾಚಯ್ಯ ವೀಣಾ ಅಚ್ಚಯ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ ಚಂದ್ರಕಲಾ ಕೆ.ಬಿ.ಶಾಂತಪ್ಪ ಡಿ.ಎಫ್.ಎಫ್ ಅಧ್ಯಕ್ಷ ದಿವಾಕರ ಭಾಗವಹಿಸಿದ್ದರು.
ಸಿದ್ದಾಪುರದಲ್ಲಿ ಸ್ವಚ್ಛತಾ ಅಭಿಯಾನ
ಸಿದ್ದಾಪುರ: ಶಾಸಕ ಎ.ಎಸ್ ಪೊನ್ನಣ್ಣ ಅವರ 50ನೇ ಜನ್ಮದಿನದ ಪ್ರಯುಕ್ತ ಪಾಲಿಬೆಟ್ಟ ವಲಯ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ಈ ವೇಳೆ ವಲಯ ಅಧ್ಯಕ್ಷರಾದ ಮಾಳೇಟಿರ ಸಾಬು ಕಾಳಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ನಾಸಿರ್ ಅನಿತಾ ರಾಮದಾಸ್ ಮುಖಂಡರಾದ ರಾಮದಾಸ್ ಮೈಕಲ್ ಹಾಗೂ ಪುಲಿಯಂಡ ಸತ್ಯ ಭಾಗವಹಿಸಿದ್ದರು. ಸಿದ್ದಾಪುರ ವಲಯ ಕಾಂಗ್ರಸ್ ವತಿಯಿಂದ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ಬಳಿಕ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಈ ವೇಳೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಬಿ ಪ್ರತಿಶ ಮುಖಂಡರಾದ ಪ್ರೇಮಾ ಗೋಪಾಲ್ ಪಳನಿಸ್ವಾಮಿ ಮೂಸ ದೇವಯಾನಿ ಅಭಿತ ಭಾಗವಹಿಸಿದ್ದರು. ಚೆನ್ನಯ್ಯನಕೋಟೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ತ್ಯಾಜ್ಯ ತೆಗೆದು ಶುಚಿಗೊಳಿಸಲಾಯಿತು. ಮುಖಂಡರಾದ ಎಚ್.ಬಿ.ಗಣೇಶ್ ಸಣ್ಣಯ್ಯ ಪಿ.ಆರ್.ಶೀಲಾ ರವೀಂದ್ರ ರಾಜೇಶ್ ಸಿದ್ದಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.