ಮಡಿಕೇರಿ: ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ 32 ಮಕ್ಕಳಿಗೆ ತಲಾ ₹ 5 ಸಾವಿರದಂತೆ ಒಟ್ಟು ₹ 1.60 ಲಕ್ಷ ನೆರವನ್ನು ‘ವಿದ್ಯಾನಿಧಿ’ಯ ರೂಪದಲ್ಲಿ ಈಚೆಗೆ ವಿತರಿಸಲಾಯಿತು.
ಪತ್ರಕರ್ತರ 22 ಮಕ್ಕಳು ಹಾಗೂ ನೆರವು ಬಯಸಿದ್ದ ಇತರೆ 10 ಮಕ್ಕಳಿಗೆ ಈ ನೆರವು ನೀಡಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ಟ್ರಸ್ಟಿ ಟಿ.ಪಿ.ರಮೇಶ್, ‘ಮುಂಬರುವ ದಿನಗಳಲ್ಲಿ ಈ ಕಾರ್ಯವನ್ನು ಮತ್ತಷ್ಟು ವ್ಯಾಪಕವಾಗಿ ಮಾಡಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.
ಮತ್ತೊಬ್ಬ ಹಿರಿಯ ಟ್ರಸ್ಟಿ ಜಿ.ಚಿದ್ವಿಲಾಸ್ ಮಾತನಾಡಿ, ‘ವಿದ್ಯಾನಿಧಿ’ಯ ಉಪಯೋಗ ಪಡೆಯುವುದಕ್ಕೆ ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲ. ನಾವೆಲ್ಲ ಮನುಷ್ಯರೇ ಎನ್ನುವ ಉದಾತ್ತ ಚಿಂತನೆಯಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸಾಧ್ಯವಾದ ನೆರವನ್ನು ಒದಗಿಸುವುದು ನಮ್ಮ ಸಂಕಲ್ಪ’ ಎಂದರು.
ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಮಾತನಾಡಿ, ‘ನೆರವು ಪಡೆದವರು, ಅದನ್ನು ಸದ್ವಿನಿಯೋಗ ಪಡೆದುಕೊಳ್ಳುವುದರೊಂದಿಗೆ, ಮುಂಬರುವ ದಿನಗಳಲ್ಲಿ ತಾವು ಸಹ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎನ್ನುವ ಮನೋಭಾವ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಖಜಾಂಚಿ ಕೆ.ತಿಮ್ಮಪ್ಪ, ಟ್ರಸ್ಟಿ ಮುಲ್ಲೇಂಗಡ ಮಧೋಶ್ ಪೂವಯ್ಯ, ಹಿರಿಯ ಪತ್ರಕರ್ತರಾದ ಶ್ರೀಧರ ನೆಲ್ಲಿತ್ತಾಯ, ಎಚ್.ಟಿ.ಅನಿಲ್, ಉಷಾ ಪ್ರೀತಂ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.