ಸುಂಟಿಕೊಪ್ಪ: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿ 53ನೇ ವರ್ಷದ ಮಂಡಲ ಪೂಜೋತ್ಸವವು ಡಿ.27ರಂದು ನಡೆಯಲಿದೆ.
ಕಳೆದ 2-3 ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಿಕೊಂಡು ಬಂದಿದ್ದ ಮಂಡಲ ಪೂಜೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಈ ಮಧ್ಯೆ ಕೊರೊನಾ ರೂಪಾಂತರಿ ವೈರಸ್ ಹರಡುತ್ತಿರುವ ಬಗ್ಗೆಯೂ ಆತಂಕದ ನಡುವೆ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದೆ.
ದೇವಾಲಯದ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಕಳೆದೆರಡು ವರ್ಷಗಳಿಂದ ಇಳಿಮುಖಗೊಂಡಿದ್ದ ಅಯ್ಯಪ್ಪ ವ್ರತಧಾರಿಗಳ ಸಂಖ್ಯೆ ಈ ಬಾರಿ ಹೆಚ್ಚಾಗಿದೆ.
ಈ ಬಾರಿ ರಾತ್ರಿ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಅಲ್ಲದೇ ಮಧ್ಯಾಹ್ನ 2000ಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ದೇವಾಲಯದ ಆಡಳಿತ ಮಂಡಳಿ ಮಾಡಿದೆ.
ಇಂದಿನ ಪೂಜೆಯ ವಿವರ: ಬೆಳಿಗ್ಗೆ 6.45 ಗಣಪತಿ ಹೋಮ, 7.10ಕ್ಕೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, 7.30ಕ್ಕೆ ಚಂಡೆಮೇಳ, 9ಕ್ಕೆ ಅಯ್ಯಪ್ಪ ಸ್ವಾಮಿಗೆ ಚಂಚಾಮೃತ ಅಭಿಷೇಕ, 11ಕ್ಕೆ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, 12ಕ್ಕೆ ಪಲ್ಲಪೂಜೆ, ಬಿಲ್ವಪತ್ರೆ ಅರ್ಚನೆ, ತುಳಸಿ ಅರ್ಚನೆ, ದೂರ್ವಾರ್ಚನೆ, ಪಂಚಾಮೃತ ಅಭಿಷೇಕ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಆರತಿ ಪೂಜೆ ಹಾಗೂ ಪಟಾಕಿ ಪ್ರದರ್ಶನ ನಡೆಯಲಿದೆ.
ನಂತರ 4ಗಂಟೆವರೆಗೆ ಅನ್ನಸಂತರ್ಪಣೆ, ಸಂಜೆ 6.30ಕ್ಕೆ ವಿಶೇಷ ದೀಪಾರಾಧನೆ ಮತ್ತು ಅದ್ದೂರಿ ಮೆರವಣಿಗೆ ನಡೆಯಲಿದೆ.
‘ಈ ಬಾರಿ 54ನೇ ಮಂಡಲ ಪೂಜೋತ್ಸವ ನಡೆಯಲಿದ್ದು, ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಪ್ರಧಾನ ಅರ್ಚಕ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿದೆ’ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ (ಪುಟ್ಟ) ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.