ನಾಪೋಕ್ಲು: ಕಾವೇರಿ ನದಿ ತೀರದ ಪವಿತ್ರ ಯಾತ್ರಾಸ್ಥಳವಾದ ಬಲಮುರಿಯಲ್ಲಿ ಶುಕ್ರವಾರ ವಾರ್ಷಿಕ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಅಧಿಕ ಸಂಖ್ಯೆಯ ಭಕ್ತರು ಕಾವೇರಿ ತೀರ್ಥಸ್ನಾನ ಮಾಡಿದರು. ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಕೇಶ ಮುಂಡನ, ಪಿಂಡಪ್ರದಾನ ಮತ್ತಿತರ ಕಾರ್ಯಗಳು ಜರುಗಿದವು.
ಸಮೀಪದ ಮೂರ್ನಾಡು, ನಾಪೋಕ್ಲು, ಹೊದ್ದೂರು, ಕಬಡಕೇರಿ, ಪಾಲೂರು, ಪಾರಾಣೆ ಮತ್ತಿತರ ಭಾಗಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಆಗಸ್ತೇಶ್ವರ ದೇವಾಲಯದಲ್ಲಿ ನಡೆದ ಜಾತ್ರೆಯಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ಮಧ್ಯಾಹ್ನ ಮಹಾಪೂಜೆ ನಡೆಯಿತು. ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಕೈಗೊಳ್ಳಲಾಯಿತು.
ಅಗಸ್ತೇಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾದು ತಮ್ಮಯ್ಯ ಮಾತನಾಡಿ, ‘ತಲಕಾವೇರಿಯಲ್ಲಿ ಕಾವೇರಿಯು ತೀರ್ಥ ರೂಪಿಣಿಯಾಗಿ ಹರಿದ ಮರುದಿನ ಬಲಮುರಿಯಲ್ಲಿ ಉತ್ಸವವನ್ನು ಆಚರಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಗಸ್ತ್ಯ ಮಹರ್ಷಿ ಪೂಜಿಸಿದ ಸ್ಥಳವಾದ ಈ ಕ್ಷೇತ್ರ ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದು, ತಲಕಾವೇರಿ ಕ್ಷೇತ್ರಕ್ಕೆ ಇರುವಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಬಲಮುರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಕಾವೇರಿ ನದಿಗೆ ಮಹಾಮಂಗಳಾರತಿ ನೆರವೇರಿಸಲಾಗಿದೆ. ಬಳಿಕ, ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಮಹಾಪೂಜೆ ಕೈಗೊಳ್ಳಲಾಗಿದ್ದು, ಭಕ್ತರಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ಮಾಡಲಾಗಿದೆ’ ಎಂದರು.
ಅನ್ನಸಂತರ್ಪಣೆ ಸಮಿತಿಯ ಅಧ್ಯಕ್ಷ ಬೊಳ್ಳಚೆಟ್ಟಿರ ಚಟ್ಟಿಚ್ಚ ಮಾತನಾಡಿ, ‘ಗ್ರಾಮದ 21 ಜನ ಸದಸ್ಯರು ಒಟ್ಟುಗೂಡಿ ಅನ್ನದಾನ ಸಮಿತಿ ರಚಿಸಿದ್ದೇವೆ. ಗ್ರಾಮಸ್ಥರ ದೇಣಿಗೆಯನ್ನು ಬಳಸಿ ಬಲಮುರಿ ಜಾತ್ರೆಯಂದು ಭಕ್ತರಿಗೆ ಅನ್ನ ಸಂತರ್ಪಣೆ ಕೈಗೊಳ್ಳಲಾಗುತ್ತಿದೆ’ ಎಂದರು.
ಆಗಸ್ತೇಶ್ವರ ದೇವಾಲಯ ಸಮಿತಿ ಹಾಗೂ ಮಹಾದೇವ ಸ್ಪೋರ್ಟ್ ಕ್ಲಬ್ ವತಿಯಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಲಮುರಿ ಕ್ಷೇತ್ರದಲ್ಲಿ ಭಕ್ತರು ಬೆಳಗಿನಿಂದಲೇ ಪಿಂಡಪ್ರದಾನ ಮಾಡಿದರು. ಕೇಶ ಮುಂಡನ ಮಾಡಿಸಿಕೊಂಡರು ಹಾಗೂ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ಮಹಾಬಲೇಶ್ವರ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಪೊನ್ನಚನ ಜಯ, ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
ಕಾವೇರಿ ಎಡದಂಡೆಯ ಕಣ್ವ ಮುನೇಶ್ವರ ದೇವಾಲಯದಲ್ಲಿಯೂ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಯಿತು. ಮಧ್ಯಾಹ್ನ ದೇವಾಲಯದಲ್ಲಿ ಮಹಾಪೂಜೆ ನೆರವೇರಿತು. ಇದಕ್ಕೂ ಮುನ್ನ ಅರ್ಚಕ ವೃಂದ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದರು.
ಅರ್ಚಕ ರವಿ ಕಲ್ಲುರಾಯ ಮಾತನಾಡಿ, ‘ದೇವಾಲಯದಲ್ಲಿ ಕಾವೇರಿ ತೀರ್ಥವನ್ನು ತಂದು ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪೂಜೆ ನೆರವೇರಿಸಿ, ಭಕ್ತರಿಗೆ ಅನ್ನ ಸಂತರ್ಪಣೆ ಕೈಗೊಳ್ಳಲಾಯಿತು ಎಂದರು.
ಎರಡೂ ದೇವಾಲಯಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪಾಲ್ಗೊಂಡಿದ್ದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಉತ್ತಪ್ಪ, ಕಾರ್ಯದರ್ಶಿ ಚೇಯಂಡ ತಿಮ್ಮಯ್ಯ ಪಾಲ್ಗೊಂಡಿದ್ದರು. ಅರ್ಚಕ ರವಿ ಕಲ್ಲುರಾಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.