ಮಡಿಕೇರಿ: ಹೆಣ್ಣೊಬ್ಬಳು ತನ್ನ ಕಠಿಣ ನಿರ್ಧಾರಗಳಿಂದ ಜೀವನದಲ್ಲಿ ಧೈರ್ಯವಾಗಿ ಹೇಗೆ ಮುನ್ನುಗ್ಗುತ್ತಾಳೆ ಎಂಬ ವಿಷಯವುಳ್ಳ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ‘ಪಾರು’ ಇಂಗ್ಲೀಷ್ ಪುಸ್ತಕ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಗುರುವಾರ ಲೋಕಾರ್ಪಣೆಗೊಂಡಿತು.
ಖ್ಯಾತ ವೈದ್ಯರು ಹಾಗೂ ಚಿಂತಕರಾದ ಡಾ.ಮನೋಹರ್ ಪಾಟ್ಕರ್ ಮಾತನಾಡಿ, ‘ನಾನು ಈ ಪುಸ್ತಕವನ್ನು ಸಂಪೂರ್ಣವಾಗಿ ಓದಿದ್ದು, ಪ್ರತಿಯೊಬ್ಬರೂ ಪುಸ್ತಕ ಖರೀದಿಸಿ ಓದಬೇಕು’ ಎಂದು ಸಲಹೆ ನೀಡಿದರು. ಜೊತೆಗೆ, ಪುಸ್ತಕದ ಕುರಿತು ಮೆಚ್ಚುಗೆ ಮಾತುಗಳನ್ನಾಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ‘ಪುಸ್ತಕಗಳ ಮೂಲಕ ಕೊಡಗಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಎಲ್ಲರಿಗೂ ಪರಿಚಯವಾಗುತ್ತಿದ್ದು, ಇದು ಉತ್ತಮ ಬೆಳವಣಿಗೆ’ ಎಂದು ಶ್ಲಾಘಿಸಿದರು.
ಪುಸ್ತಕದ ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ‘ಪ್ರಗತಿಶೀಲ ಸನ್ನಿವೇಶಗಳ ಮೇಲೆ ಪುಸ್ತಕ ಬರೆಯುವ ಆಸಕ್ತಿ ಹೊಂದಿದ್ದ ನಾನು ಪ್ರಸ್ತುತ ದಿನಗಳಲ್ಲಿ ನಡೆಯುವ ಘಟನೆಗಳನ್ನು ಕೇಂದ್ರಿಕರಿಸಿ ‘ಪಾರು’ ಪುಸ್ತಕ ರಚಿಸಿದ್ದೇನೆ’ ಎಂದು ಹೇಳಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ನಡೆಯುವ ವಿಭಿನ್ನ ವಿಚಾರಗಳ ಕುರಿತು ‘ಪಾರು’ ಪುಸ್ತಕದಲ್ಲಿ ವಿವರಿಸಲಾಗಿದ್ದು, ಇದು ಎಲ್ಲರೂ ಓದಲೇ ಬೇಕಾದ ಪುಸ್ತಕವಾಗಿದೆ’ ಎಂದು ಹೇಳಿದರು.
ಸಂತ ಜೋಸೆಫರ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಚೌರೀರ ಕಾವೇರಿ ಪೂವಯ್ಯ ಅವರು, ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರಿಗೆ ಕಿರುಕಾಣಿಕೆ ನೀಡಿ ಗೌರವಿಸಿದರು.
ಹಿರಿಯ ವೈದ್ಯರಾದ ಡಾ.ಜಯಲಕ್ಷ್ಮಿ ಪಾಟ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಪವಿತ್ರ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಬೊಳ್ಳಜಿರ ಯಮುನಾ ಅಯ್ಯಪ್ಪ, ಕಂಬೆಯಂಡ ಸೀತಾಲಕ್ಷ್ಮಿ ಅಪ್ಪಯ್ಯ, ಚೌರಿರ ಕಾವೇರಿ ಪೂವಯ್ಯ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.