ಮಡಿಕೇರಿ: ಇಲ್ಲಿನ ಗೋಣಿಕೊಪ್ಪಲು ಸಮೀಪ ಈಚೆಗೆ ಕೇರಳದ ಕೆ.ಶಂಜಾದ್ ಅವರನ್ನು ಅಡ್ಡಗಟ್ಟಿ ₹ 50 ಲಕ್ಷ ನಗದನ್ನು ಡಕಾಯಿತಿ ಮಾಡಿದ ಪ್ರಕರಣದ ಬೆನ್ನು ಬಿದ್ದಿರುವ ಕೊಡಗು ಜಿಲ್ಲಾ ಪೊಲೀಸರಿಗೆ ಕಾಳಸಂತೆಯ ಅನೇಕ ಮಜಲುಗಳು ಗೊತ್ತಾಗಲಾರಂಭಿಸಿವೆ.
ಯಾವುದೇ ಪೂರ್ವಾಪರಗಳನ್ನೂ ವಿಚಾರಿಸದೇ ಎಷ್ಟೇ ಚಿನ್ನದ ಗಟ್ಟಿ ಇದ್ದರೂ ಅದನ್ನು ಖರೀದಿಸಿ ಕೋಟ್ಯಂತರ ರೂಪಾಯಿ ನಗದನ್ನೇ ಕೊಡುವ ಅಂಗಡಿಗಳು ಮೈಸೂರಿನಲ್ಲಿ ಮುಗುಮ್ಮನೇ ಕಾರ್ಯಾಚರಿಸುತ್ತಿವೆ. ಇಂತಹ ಅಂಗಡಿಗಳನ್ನು ‘ಬುಲಿಯನ್’ ಅಂಗಡಿಗಳೆಂದೇ ಕರೆಯಲಾಗುತ್ತಿದ್ದು, ಇಲ್ಲೆಲ್ಲ ಕೋಟಿಗಟ್ಟಲೆ ವ್ಯವಹಾರಗಳು ಸದ್ದಿಲ್ಲದೇ ನಡೆಯುತ್ತಿವೆ. ಬಹುತೇಕ ಕಡೆ ಯಾವುದೇ ರಸೀತಿಗಳು ಇಲ್ಲದೇ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿರುವುದೂ ಗೊತ್ತಾಗಿದೆ.
‘ಮೈಸೂರಿನ ಅಶೋಕರಸ್ತೆ ಹಾಗೂ ದೇವರಾಜ ಅರಸು ರಸ್ತೆಗಳಲ್ಲಿ ಇಂತಹ ಕೆಲವಾರು ಅಂಗಡಿಗಳಿವೆ. ಅವುಗಳಲ್ಲಿ ಕೆಲವು ತೀರಾ ಚಿಕ್ಕದಾಗಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ವಹಿವಾಟು ನಡೆಯುವ ತಾಣ ಎಂದು ನಂಬಲು ಅಸಾಧ್ಯವಾಗಿರುವಂತಹವೂ ಇವೆ. ಇಲ್ಲೆಲ್ಲ ಚಿನ್ನದ ಗಟ್ಟಿಯನ್ನು ಕ್ಷಣಾರ್ಧದಲ್ಲಿ ಪರೀಕ್ಷಿಸಿ, ನಗದು ಹಣವನ್ನು ಕೊಟ್ಟು ಕಳುಹಿಸುವ ವ್ಯವಸ್ಥೆ ಇದೆ’ ಎಂದು ದರೋಡೆ ಪ್ರಕರಣವೊಂದರ ತನಿಖೆಯಲ್ಲಿ ಭಾಗಿಯಾಗಿದ್ದ ಹೊರ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ನ್ಯಾಯಬದ್ದವಾಗಿ ಚಿನ್ನದಗಟ್ಟಿಗಳನ್ನು ಖರೀದಿಸುವ ಅಂಗಡಿಗಳೂ ಇವೆ, ಜಿಎಸ್ಟಿ ಸೇರಿದಂತೆ ಎಲ್ಲ ಬಗೆಯ ತೆರಿಗೆಯನ್ನು ಪಾವತಿಸುವಂತಹ ಅಂಗಡಿಗಳೂ ಇವೆ. ಆದರೆ, ಕೇರಳದವರು ಸಾಮಾನ್ಯವಾಗಿ ಇಂತಹ ಅಂಗಡಿಗಳ ಬದಲಿಗೆ ಯಾವುದೇ ಬಿಲ್ ನೀಡದ ಅಂಗಡಿಗಳನ್ನೇ ಆಯ್ಕೆ ಮಾಡಿಕೊಳ್ಳುವುದು ವಾಡಿಕೆಯಾಗಿದೆ.
ಇಂತಹ ಅಂಗಡಿಗಳ ಮಾಲೀಕರೇ ದರೋಡೆಕೋರರಿಗೆ ಅಥವಾ ಡಕಾಯಿತಿದಾರರಿಗೆ ಮಾಹಿತಿ ರವಾನಿಸಬಹುದೇ ಎಂಬ ಅಂಶದ ಕುರಿತೂ ಪೊಲೀಸರು ಸಾಕಷ್ಟು ತನಿಖೆ ಕೈಗೊಂಡಿದ್ದರು. ಆದರೆ, ಅಂಗಡಿ ಮಾಲೀಕರಿಗೂ, ದರೋಡೆಕೋರರಿಗೆ ಯಾವುದೇ ಸಂಪರ್ಕ ಇರುವ ಅಂಶ ಪತ್ತೆಯಾಗಲಿಲ್ಲ.
ದರೋಡೆಕೋರರ ವ್ಯಾಪಕ ಜಾಲ: ದರೋಡೆಕೋರರ ಜಾಲ ಎಷ್ಟು ವ್ಯಾಪಕವಾಗಿದೆ ಎಂದರೆ ಚಿನ್ನದಗಟ್ಟಿಯನ್ನು ಮಾರಾಟ ಮಾಡುವ ಅಂಗಡಿಗಳ ಮುಂದೆಯೇ ಇವರು ಭಿಕ್ಷುಕರು, ಹುಚ್ಚರ ವೇಷದಲ್ಲಿ ಓಡಾಡಿಕೊಂಡಿರುತ್ತಾರೆ. ಹಣ ಇರುವ ಬ್ಯಾಗನ್ನು ಕಾರಿನೊಳಗೆ ಇರಿಸುವುದನ್ನು ಕಂಡ ಕೂಡಲೇ ತಂಡದ ಇತರ ಸದಸ್ಯರಿಗೆ ಮಾಹಿತಿ ರವಾನಿಸುತ್ತಾರೆ. ಅಲ್ಲೇ ಸಮೀಪದಲ್ಲೆ ಇರುವ ಕಾರು ಹಣ ಸಾಗಿಸುವವರ ಕಾರನ್ನು ಹಿಂಬಾಲಿಸುತ್ತದೆ. ಸಾಮಾನ್ಯವಾಗಿ ಇಂತಹ ವ್ಯವಹಾರವನ್ನು ಕೇರಳದವರೇ ಹೆಚ್ಚು ನಡೆಸುವುದರಿಂದ ಗುಂಡ್ಲುಪೇಟೆ ಮಾರ್ಗದಲ್ಲಿ ಒಂದು ತಂಡ, ಹುಣಸೂರು ಮಾರ್ಗದಲ್ಲಿ ಮತ್ತೊಂದು ತಂಡ ಸನ್ನದ್ಧವಾಗಿರುತ್ತದೆ. ನಿರ್ಜನ ಪ್ರದೇಶದಲ್ಲಿ, ಆಯಾಕಟ್ಟಿನ ಜಾಗದಲ್ಲಿ ಕಾರನ್ನು ಅಡ್ಡಗಟ್ಟಲಾಗುತ್ತದೆ ಎಂದು ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಹೇಳಿದರು.
ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ತನಿಖೆಯನ್ನು ಚುರುಕುಗೊಳಿಸಲಾಗಿದೆ.ಕೆ.ರಾಮರಾಜನ್ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.