ಗೋಣಿಕೊಪ್ಪಲು: ಕಾಫಿ ತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಕೃಷಿ ಕಾರ್ಮಿಕರಿಗೆ ನಿವೇಶನಕ್ಕೆ ಆಗ್ರಹಿಸಿ ಪಾಲಿಬೆಟ್ಟ ಹೊಸೂರು ಗ್ರಾಮ ಪಂಚಾಯಿತಿ ಎದುರು ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ 6ನೇ ದಿನ ಶನಿವಾರವೂ ಮುಂದುವರಿದಿದೆ.
ಧರಣಿ ಆರಂಭಗೊಂಡ ಮೊದಲ ದಿನ ಮಾತ್ರ ತಾಲ್ಲೂಕು ಪಂಚಾಯಿತಿ ಇಒ ಅಪ್ಪಣ್ಣ ಸ್ಥಳಕ್ಕೆ ಭೇಟಿ ಮಾಡಿದ್ದನ್ನು ಬಿಟ್ಟರೆ ಉಳಿದ ಯಾರೂ ಅತ್ತ ಸುಳಿದಿಲ್ಲ. ಬುಡಕಟ್ಟು ಮಹಿಳೆಯರು, ಪುರುಷರು, ವಿದ್ಯಾರ್ಥಿಗಳು ಮತ್ತು ಮಕ್ಕಳು ಧರಣಿಯಲ್ಲಿ ನಿರತರಾಗಿದ್ದಾರೆ.
ಸುರಿಯುತ್ತಿರುವ ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲ್ ಹಾಕಿಕೊಂಡಿದ್ದಾರೆ. ಅದರ ಕೆಳಗೆ ಕುಳಿತು ನ್ಯಾಯಕ್ಕಾಗಿ ಘೋಷಣೆ ಕೂಗುತ್ತಾ ಧರಣಿ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಧರಣಿ ನಿರತ ಬುಡಕಟ್ಟು ಕೃಷಿಕರ ಸಂಘದ ಮುಖಂಡ ಗಪ್ಪು,‘ನಮ್ಮ ಕಷ್ಟ ಆಲಿಸುವುದಕ್ಕೆ ಯಾರೂ ಇತ್ತ ಸುಳಿದು ನೋಡಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿ ಬಿಟ್ಟು ಧರಣಿಯಲ್ಲಿ ಕುಳಿತಿದ್ದಾರೆ. ಇತರರು ಕೂಲಿ ಬಿಟ್ಟು ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಊಟಕ್ಕೆ ಮತ್ತು ಮಕ್ಕಳ ಶಾಲೆಗೆ ಕಷ್ಟವಾಗಿದೆ. ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.