ADVERTISEMENT

ದಶಮಂಟಪಗಳ ಶೋಭಾಯಾತ್ರೆಗೆ ಕ್ಷಣಗಣನೆ

ಎಲ್ಲೆಡೆ ನಡೆದಿದೆ ಭರದ ಸಿದ್ಧತೆ, ಬಿಗಿಬಂದೋಬಸ್ತ್, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಬೀಳಲಿದೆ ತೆರೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2024, 5:12 IST
Last Updated 11 ಅಕ್ಟೋಬರ್ 2024, 5:12 IST
ಮಡಿಕೇರಿ ನಗರದ ಹಲವೆಡೆ ವಿವಿಧ ದೇವತೆಗಳ ಚಿತ್ರವನ್ನು ವಿದ್ಯುತ್ ದೀಪಾಲಂಕಾರ ಮಾಡಿದ್ದ ದೃಶ್ಯಗಳು ಗುರುವಾರ ರಾತ್ರಿ ಕಂಡು ಬಂದವು  ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ನಗರದ ಹಲವೆಡೆ ವಿವಿಧ ದೇವತೆಗಳ ಚಿತ್ರವನ್ನು ವಿದ್ಯುತ್ ದೀಪಾಲಂಕಾರ ಮಾಡಿದ್ದ ದೃಶ್ಯಗಳು ಗುರುವಾರ ರಾತ್ರಿ ಕಂಡು ಬಂದವು  ಪ್ರಜಾವಾಣಿ ಚಿತ್ರ/ರಂಗಸ್ವಾಮಿ   

ಮಡಿಕೇರಿ: ನವರಾತ್ರಿಯ ಅಂತಿಮ ಘಟ್ಟ, ವಿಜಯದಶಮಿಯ ದಸರಾ ದಶಮಂಟಪಗಳ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಅ. 12ರಂದು ರಾತ್ರಿ ಶುರುವಾಗುವ ಈ ಸಂಭ್ರಮದ ಮೆರವಣಿಗೆಗೆ ಸಿದ್ಧತೆಗಳು ಭರದಿಂದ ನಡೆದಿವೆ.

ಎಲ್ಲ ಹತ್ತು ದೇವಸ್ಥಾನಗಳ ಮಂಟಪಗಳ ಸಮಿತಿಯವರು ತಮ್ಮ ತಮ್ಮ ಮಂಟಪಗಳನ್ನು ಬಿರುಸಿನಿಂದ ತಯಾರಿಸುತ್ತಿದ್ದಾರೆ. ಈ ಮಧ್ಯೆ ಗುರುವಾರ ಬಂದ ತುಂತುರು ಮಳೆ, ಬೀಸುತ್ತಿರುವ ಗಾಳಿ ಹಾಗೂ ಆವರಿಸಿರುವ ಮೋಡಗಳ ಆತಂಕವನ್ನೂ ತಂದೊಡ್ಡಿವೆ.

ಅ. 12ರಂದು ರಾತ್ರಿಯಿಂದ ಆರಂಭವಾಗುವ ಶೋಭಾಯಾತ್ರೆ ಮರುದಿನ ನಸುಕಿನವರೆಗೂ ಸಾಗಲಿದೆ. ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಪೊಲೀಸರೂ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸುಮಾರು 2 ಸಾವಿರ ಪೊಲೀಸರು ರಕ್ಷಣೆಗೆಂದೆ ನಿಯೋಜಿತರಾಗಿದ್ದಾರೆ.

ADVERTISEMENT

ಹಲವೆಡೆ ಚೆಕ್‌ಪೋಸ್ಟ್ ರಚಿಸಿ ಎಲ್ಲೆಡೆ ಹದ್ದಿನ ಕಣ್ಣ ಇರಿಸಿದ್ದಾರೆ. ಜಂಬೊ ತಂಡಗಳು ಹೆಚ್ಚು ಜನಸಂದಣಿ ಇರುವ ಜಾಗಗಳಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರನ್ನು ರಕ್ಷಿಸುವ ಹೊಣೆ ಹೊತ್ತಿದೆ.

ಈಗಾಗಲೇ ಇಡೀ ನಗರದ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಮಹದೇವಪೇಟೆ, ಕಾಲೇಜು ರಸ್ತೆ, ನಗರಸಭೆ, ಜನರಲ್ ತಿಮ್ಮಯ್ಯ ವೃತ್ತ, ಗಾಂಧಿ ಮಂಟಪ ಸೇರಿದಂತೆ ಹಲವೆಡೆ ಜಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಕಟ್ಟಡಗಳೂ ದೀಪಗಳಿಂದ ಸಿಂಗಾರಗೊಂಡಿವೆ. ದೀಪಗಳ ಬೆಳಕಿನಲ್ಲಿ ಮಂಜಿನನಗರಿ ವೈಭವೋಪೇತವಾಗಿ ಕಾಣುತ್ತಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅ. 11ರಂದು ಮಧ್ಯಾಹ್ನ 2 ಗಂಟೆಗೆ ಗಾಂಧಿ ಮೈದಾನಕ್ಕೆ ಬರಲಿದ್ದು, ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಾತ್ರವಲ್ಲ, ಎಲ್ಲ 10 ಮಂಟಪಗಳ ಸಿದ್ದತೆಯನ್ನೂ ಪರಿಶೀಲಿಸಲಿದ್ದಾರೆ.

ನಗರದಲ್ಲಿ ಈಗಾಗಲೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ನಗರದೊಳಗೆ ವಾಹನ ಸಂಚಾರ ಮಂದಗತಿಯಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ನಗರದಲ್ಲಿ ಎಲ್ಲಿ ನೋಡಿದರಲ್ಲಿ ಜನರೇ ಕಾಣಿಸುತ್ತಿದ್ದಾರೆ.

ಮಡಿಕೇರಿ ನಗರದ ಹಲವೆಡೆ ವಿವಿಧ ದೇವತೆಗಳ ಚಿತ್ರವನ್ನು ವಿದ್ಯುತ್ ದೀಪಾಲಂಕಾರ ಮಾಡಿದ್ದ ದೃಶ್ಯಗಳು ಗುರುವಾರ ರಾತ್ರಿ ಕಂಡು ಬಂದವು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ನಗರದ ಹಲವೆಡೆ ವಿವಿಧ ದೇವತೆಗಳ ಚಿತ್ರವನ್ನು ವಿದ್ಯುತ್ ದೀಪಾಲಂಕಾರ ಮಾಡಿದ್ದ ದೃಶ್ಯಗಳು ಗುರುವಾರ ರಾತ್ರಿ ಕಂಡು ಬಂದವು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ನಗರದಲ್ಲಿ ವಿವಿಧ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ದೃಶ್ಯ ಗುರುವಾರ ಕಂಡು ಬಂತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ನಗರದಲ್ಲಿ ಕಾವೇರಿ ಕಲಾಕ್ಷೇತ್ರದ ಶಿಥಿಲ ಕಟ್ಟಡವನ್ನೂ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ದೃಶ್ಯ ಗುರುವಾರ ಕಂಡು ಬಂತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ನಗರದ ನಗರಸಭೆ ಕಟ್ಟಡ ಕಂಗೊಳಿಸುತ್ತಿದ್ದ ದೃಶ್ಯ ಗುರುವಾರ ಕಂಡು ಬಂತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಚಿದ್ವಿಲಾಸ

ಹಲವು ಸಾಧಕರಿಗೆ ಸನ್ಮಾನ

ಅ. 11ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹಲವು ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಮಡಿಕೇರಿ ನಗರ ದಸರಾ ಸಮಿತಿಯ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ತಿಳಿಸಿದರು. ಡಾ.ಅನಿಲ್‌ ಚೆಂಗಪ್ಪ (ವೈದ್ಯಕೀಯ) ದಿನೇಶ್‌ ಕಾರ್ಯಪ್ಪ (ವಾಣಿಜ್ಯ) ಬೇಬಿ ಮ್ಯಾಥ್ಯೂ (ಸಮಾಜಸೇವೆ)  ಮೋಂತಿ ಗಣೇಶ್ (ಮಹಿಳಾ ಕ್ಷೇತ್ರ) ನವನೀತ (ಕ್ರೀಡೆ) ಟನಲ್‌ ಸಂಸ್ಥೆ (ಸಮಾಜಸೇವೆ) ಹಾಗೂ ಅಂತರರಾಷ್ಟ್ರೀಯ ಮಾದಕವಸ್ತು ಜಾಲ ಭೇದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ 34 ಮಂದಿ ಪೊಲೀಸರನ್ನು ಸನ್ಮಾನಿಸಲಾಗುವುದು ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದರೊಂದಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನೂ ಗೌರವಿಸಲಾಗುವುದು ಎಂದರು. ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಪದಾಧಿಕಾರಿಗಳಾದ ರಾಜೇಶ್ ಅರುಣ್‌ಶೆಟ್ಟಿ ಭಾಗವಹಿಸಿದ್ದರು.

‘ಶೋಭಾಯಾತ್ರೆಯಲ್ಲಿ ಡಿ.ಜೆ ಲೇಸರ್ ನಿಷೇಧ’

ಮಡಿಕೇರಿ ದಸರಾ ದಶಮಂಟಪಗಳ ಸಮಿತಿ ಅಧ್ಯಕ್ಷ ಬಿ.ಕೆ.ಜಗದೀಶ್ ಮಾತನಾಡಿ ‘ಈ ಬಾರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಅಬ್ಬರದ ಡಿ.ಜೆ. ಲೇಸರ್ ಲೈಟ್‌ಗಳು ಸಿಡಿಮದ್ದುಗಳು ಹಾಗೂ ಹೊಗೆಯ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ ಅಂತಹ ಮಂಟಪಗಳನ್ನು ಬಹುಮಾನದಿಂದ ಹೊರಗಿಡಲಾಗುವುದು. ಹಾಗಾಗಿ ಎಲ್ಲ ಮಂಟಪ ಸಮಿತಿಯವರು ನಿಯಮಗಳ ಪಾಲನೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಮನವಿ ಮಾಡಿದರು. ಎಲ್ಲ ಮಂಟಪದವರೂ ಈ ಬಾರಿ ಬನ್ನಿ ಕಡಿಯಲೇಬೇಕು ಎಂದು ನಿಯಮ ರೂಪಿಸಲಾಗಿದೆ. ನಮ್ಮ ಸಂಸ್ಕೃತಿ ಪದ್ಧತಿ ಹಾಗೂ ಆಚಾರ ವಿಚಾರಗಳಿಗೆ ಯಾವುದೇ ಚ್ಯುತಿ ಬರದಂತೆ ಎಲ್ಲರೂ ವರ್ತಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.