ವಿರಾಜಪೇಟೆ: ಕಾಫಿ ತೋಟವೊಂದರಲ್ಲಿ ಮೊಸಳೆ ಕಾಣಿಸಿಕೊಂಡು ಗ್ರಾಮಸ್ಥರಿಗೆ ಕೆಲಕಾಲ ಆತಂಕವುಂಟು ಮಾಡಿದ ಘಟನೆ ಸಮೀಪದ ಕೊಳತ್ತೋಡು-ಬೈಗೋಡು ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಸೋಮೆಯಂಡ ಮನೋಜ್ ಬೋಪಯ್ಯ ಎಂಬುವವರ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ತೋಟದಲ್ಲಿ ನೀರಿಲ್ಲದ ಹಳ್ಳವೊಂದರಲ್ಲಿ ಕಂಡಿದೆ. ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಮೊಸಳೆ ವಶಕ್ಕೆ ಪಡೆದು ಸಂರಕ್ಷಿಸಿದ್ದಾರೆ.
ಸಮೀಪದಲ್ಲಿ ಯಾವುದೇ ದೊಡ್ಡ ನದಿಯಾಗಲಿ ಅಥವಾ ಮೊಸಳೆಯಿರಬಹುದಾದಂತಹ ನೀರಿನ ತಾಣಗಳಿಲ್ಲ. ಆದರೂ ಗ್ರಾಮದಲ್ಲಿ ಮೊಸಳೆ ಪತ್ತೆಯಾಗಿರುವುದು ಆಶ್ಚರ್ಯದ ಜೊತೆಗೆ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಮಾಹಿತಿ ನೀಡಿದ ಗ್ರಾಮಸ್ಥರಾದ ಪುಲಿಯಂಡ ರೋಶನ್ ಕಾಳಪ್ಪ, ಮೊಸಳೆ ಸಿಕ್ಕಿದ ಸ್ಥಳದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಪುಟ್ಟ ತೋಡು (ಸಣ್ಣ ತೊರೆ) ಒಂದು ಹರಿಯುತ್ತಿದೆ. ಗ್ರಾಮದಲ್ಲಿ ಪತ್ತೆಯಾದ ಮೊಸಳೆ ಅಂದಾಜು 20 ಕೆ.ಜಿ ತೂಕ ಹಾಗೂ 6-7 ಅಡಿಗಳಷ್ಟು ಉದ್ದವಿತ್ತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.