ನಾಪೋಕ್ಲು: ಸಮೀಪದ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಮರ೦ದೊಡಿನಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಫಿ ಬೆಳೆಗಾರರು ಆತಂಕದಲ್ಲಿದ್ದಾರೆ.
ಇಲ್ಲಿನ ಕಾಫಿ ತೋಟಗಳಲ್ಲಿ ರಾತ್ರಿ ವೇಳೆ ಅಡ್ಡಾಡುವ ಕಾಡಾನೆಗಳು ದಾಂಧಲೆ ನಡೆಸಿವೆ. ಕಾಫಿಗಿಡಗಳ ರೆಂಬೆ, ಕೊಂಬೆಗಳನ್ನು ಮುರಿದುಹಾಕಿವೆ. ಇದರಿಂದ ರೈತರು ಬೆಳೆದ ಕಾಫಿ ಮತ್ತಿತರ ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಬಾಳೆ ಮತ್ತು ಇತರ ಕೃಷಿಗಿಡಗಳನ್ನು ಕಾಡಾನೆಗಳು ತುಳಿದು ನಾಶಪಡಿಸುತ್ತಿವೆ. ಮರಂದೋಡ ಗ್ರಾಮದ ನಿಡುಮಂಡ ಹರೀಶ ಹಾಗೂ ಅಶೋಕ್ ಅವರ ತೋಟಗಳಿಗೆ ಲಗ್ಗೆ ಇಟ್ಟ ಒಂಟಿ ಸಲಗವೊಂದು ಒಂದು ವಾರದಿಂದ ತೋಟದಲ್ಲಿ ಬೀಡುಬಿಟ್ಟಿದೆ. ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಸೆರೆಹಿಡಿದು ಸ್ಥಳಾಂತರಿಸಬೇಕು. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈಚೆಗೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ಕಾಫಿ ಗಿಡಗಳನ್ನು ಹಾಗೂ ಸ್ಪಿಂಕ್ಲರ್ ಪೈಪ್ ಹಾಳುಗೆಡವಿದ್ದವು. ಇದೀಗ ಮರಂದೋಡ ಗ್ರಾಮದ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.