ಮಡಿಕೇರಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪರಿಸರದ ಮೇಲೆ ಒಂದಿಷ್ಟೂ ಕಾಳಜಿ ಇಲ್ಲವೇ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಪ್ರಶ್ನಿಸಿದರು.
ಅವರು ಅಧಿಕಾರ ವಹಿಸಿಕೊಂಡ ತಕ್ಷಣವೇ ಬಳ್ಳಾರಿಯ ದೇವದಾರಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದರು. ಇದರಿಂದ ಒಂದೂವರೆ ಲಕ್ಷ ಮರಗಳು ನಾಶವಾಗುತ್ತವೆ. ಪರಿಸರದ ಬಗ್ಗೆ ಅವರಿಗೆ ಒಂದಿಷ್ಟಾದರೂ ಕಾಳಜಿ ಇದ್ದಿದ್ದರೆ ಈ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಇದರ ಬದಲು ಕುಮಾರಸ್ವಾಮಿ ಅವರು ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೊಡಿಸಲಿ, ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ಕೊಡಿಸಲಿ. ಕನಿಷ್ಠ ಈ ಕುರಿತು ಪ್ರಯತ್ನವನ್ನಾದರೂ ಪಡಲಿ ಎಂದರು.
ಮೈಸೂರು– ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗೆದ್ದ ನಂತರ ಕೊಡಗಿಗೆ ಬಂದು ಸುದ್ದಿಗೋಷ್ಠಿ ನಡೆಸಿಲ್ಲ. ಮತದಾರರಿಗೆ ಕನಿಷ್ಠ ಪಕ್ಷ ಧನ್ಯವಾದವನ್ನೂ ಅರ್ಪಿಸಿಲ್ಲ. ಹೆಚ್ಚಿನ ಮತ ನೀಡಿದ ಕೊಡಗಿನ ಜನರಿಗೆ ಅವರು ಏನು ಕೊಡುಗೆ ಕೊಡುತ್ತಾರೆ ಎನ್ನುವುದನ್ನಾದರೂ ಹೇಳಲಿ ಎಂದು ಸವಾಲೆಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.