ADVERTISEMENT

ಸೋಮವಾರಪೇಟೆ | ಸಮಸ್ಯೆ ಪರಿಹರಿಸಲು ಶಾಸಕ ಸೂಚನೆ

ವಿವಿಧ ಹಾಡಿಗಳಿಗೆ ಡಾ.ಮಂತರಗೌಡ ಭೇಟಿ; ನಿವಾಸಿಗಳ ಸಮಸ್ಯೆ ಆಲಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 6:29 IST
Last Updated 19 ಜೂನ್ 2024, 6:29 IST
ಸೋಮವಾರಪೇಟೆ ಸಮೀಪದ ಕಿಬ್ಬೆಟ್ಟ ಗಿರಿಜನರ ಹಾಡಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ನಿವಾಸಿ ಸಮಸ್ಯೆ ಆಲಿಸಿದರು. ಸಿದ್ದೇಗೌಡ, ಸತೀಶ್, ಲೋಕೇಶ್, ಚೇತನ್, ಜನಾರ್ದನ್ ಭಾಗವಹಿಸಿದ್ದರು
ಸೋಮವಾರಪೇಟೆ ಸಮೀಪದ ಕಿಬ್ಬೆಟ್ಟ ಗಿರಿಜನರ ಹಾಡಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ನಿವಾಸಿ ಸಮಸ್ಯೆ ಆಲಿಸಿದರು. ಸಿದ್ದೇಗೌಡ, ಸತೀಶ್, ಲೋಕೇಶ್, ಚೇತನ್, ಜನಾರ್ದನ್ ಭಾಗವಹಿಸಿದ್ದರು   

ಸೋಮವಾರಪೇಟೆ: ಶಾಸಕ ಡಾ.ಮಂತರ್ ಗೌಡ ಅವರು ಇಲಾಖಾಧಿಕಾರಿಗಳೊಂದಿಗೆ ತಾಲ್ಲೂಕಿನ ವಿವಿಧ ಗಿರಿಜನರ ಹಾಡಿಗಳಿಗೆ ಮಂಗಳವಾರ ಭೇಟಿ ನೀಡಿ, ನಿವಾಸಿಗಳ ಸಮಸ್ಯೆ ಆಲಿಸಿದರು.

ಸಮೀಪದ ಕಿಬ್ಬೆಟ್ಟ ಹಾಡಿಗೆ ಭೇಟಿ ನೀಡಿದ ಸಂದರ್ಭ 17 ಕುಟುಂಬಗಳಲ್ಲಿ 10 ಕುಟುಂಬದವರಿಗೆ ಅಧಾರ್‌ ಕಾರ್ಡ್ ಸಿಕ್ಕಿಲ್ಲ ಎಂದು ದೂರಿದರು.

ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಯನ್ನು ಶಾಸಕರು ಪ್ರಶ್ನಿಸಿದ ಸಂದರ್ಭ ತಾಂತ್ರಿಕದೋಷವೆಂದು ತಿಳಿಸಿದರು.

ADVERTISEMENT

‘ತಾಲ್ಲೂಕು ಕೇಂದ್ರದಲ್ಲಿ ವಿವಿಧ ಇಲಾಖಾಧಿಕಾರಿಗಳನ್ನು ಕರೆಯಿಸಿ ಅಧಾರ್ ಕಾರ್ಡ್ ಅಂದೋಲನ ಹಮ್ಮಿಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಗಿರಿಜನರಿಗೆ ಭರವಸೆ ನೀಡಿದರು.

‌ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಾಡಿಯೊಳಗೆ ಎರಡು ನೀರಿನ ಸಿಸ್ಟನ್‌ಗಳನ್ನು ಅಳವಡಿಸಲು ಕ್ರಮಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಇಇ ವೀರೇಂದ್ರ ಕುಮಾರ್ ಅವರಿಗೆ ಸೂಚಿಸಿದರು.

ಒಳಗುಂದ ಹಾಡಿಯಲ್ಲಿ ಸಮಸ್ಯೆ ಆಲಿಸಿದ ಶಾಸಕರು, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪಿಡಿಒ ಅವರನ್ನು ವಿಚಾರಿಸಿದರು. ಕೊಳವೆಬಾವಿ ಕೊರೆಸಿ 2 ವರ್ಷಗಳಾದರೂ, ನೀರು ಸರಬರಾಜು ಮಾಡುತ್ತಿಲ್ಲ ಎಂದು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸದಸ್ಯ ಅನುಕುಮಾರ್ ಶಾಸಕರ ಗಮನಕ್ಕೆ ತಂದರು.

15 ದಿನಗಳ ಒಳಗೆ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಸೆಸ್ಕ್ ಎಇಇ ರವಿಕುಮಾರ್ ಅವರಿಗೆ ಸೂಚಿಸಿದರು.

ಮೋಟರ್ ಹಾಕಿ ನೀರು ಸರಬರಾಜು ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಕಂದಾಯ, ಅರಣ್ಯ, ಸಮಾಜ ಕಲ್ಯಾಣ ಹಾಗೂ ಐಟಿಡಿಪಿ ಇಲಾಖೆ ಹಿರಿಯ ಅಧಿಕಾರಿಗಳ ಜಂಟಿ ಸಭೆ ಕರೆದು ಆಸ್ತಿ ದಾಖಲಾತಿ ನೀಡಲು ಕ್ರಮವಹಿಸುವುದಾಗಿ ಶಾಸಕರು ಗಿರಿಜನರಿಗೆ ಭರವಸೆ ನೀಡಿದರು.

ದೊಡ್ಡಬ್ಬೂರು ಹಾಡಿಯಲ್ಲಿ ಜನರ ಸಮಸ್ಯೆ ಆಲಿಸಿ, ಕೊಳವೆ ಬಾವಿ ಕೊರೆಯಿಸಿ ಕುಡಿಯುವ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನೇಗಳ್ಳೆ ಹಾಡಿಯ ನಿವಾಸಿಗಳು ರಸ್ತೆ, ಸಮರ್ಪಕ ಕುಡಿಯುವ ನೀರು, ವಾಸದ ಮನೆಗಳು ಹಕ್ಕುಪತ್ರಗಳ ಬೇಡಿಕೆಯಿಟ್ಟರು. ವಿದ್ಯುತ್ ಇಲ್ಲದೆ ಮನೆಗಳಿಗೆ ಮಾನವೀಯ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈಗ ಸರ್ಕಾರ ಉಚಿತ ವಿದ್ಯುತ್ ನೀಡುತ್ತದೆ. ಅದರ ಸೌಲಭ್ಯಗಳನ್ನು ಬಡವರು ಪಡೆದುಕೊಳ್ಳಲಿ ಎಂದು ಅಧಿಕಾರಿಗಳಿಗೆ ಶಾಸಕರು ಕಿವಿ ಮಾತು ಹೇಳಿದರು.

ಯಲಕನೂರು ಹಾಡಿಯ ನಿವಾಸಿಗಳು ಆಸ್ತಿ ಹಕ್ಕುಪತ್ರ ಕೊಡಿಸುವಂತೆ ಮನವಿ ಮಾಡಿದರು.

ಅರಣ್ಯ, ಕಂದಾಯ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು. ಪ್ರಮುಖರಾದ ಬಿ.ಬಿ. ಸತೀಶ್, ಕೆ.ಎಂ.ಲೋಕೇಶ್, ಚೇತನ್, ಜನಾರ್ದನ್, ಎಸ್.ಎಂ.ಡಿಸಿಲ್ವಾ, ಆ ವ್ಯಾಪ್ತಿಯ ಗ್ರಾ.ಪಂ.ಗಳ ಅಧ್ಯಕ್ಷರು, ಸದಸ್ಯರು ಇದ್ದರು.

ಸೋಮವಾರಪೇಟೆ ಸಮೀಪದ ಒಳಗುಂದ ಗಿರಿಜನರ ಹಾಡಿಯ ನಿವಾಸಿಗಳ ಸಮಸ್ಯೆಯನ್ನು ಶಾಸಕ ಮಂತರ್ ಗೌಡ ಆಲಿಸಿದರು.
ಸೋಮವಾರಪೇಟೆ ಸಮೀಪದ ನೇಗಳ್ಳೆ ಗ್ರಾಮದ ಗಿರಿಜನರ ಹಾಡಿಯಲ್ಲಿ ರೋಗಪೀಡಿತ ವೃದ್ಧನ ಸಮಸ್ಯೆಯನ್ನು ಶಾಸಕ ಮಂತರ್ ಗೌಡ ಆಲಿಸಿದರು

ಆಧಾರ್ ಕಾರ್ಡ್ ಇಲ್ಲವೆಂದ ಕಿಬ್ಬೆಟ್ಟ ನಿವಾಸಿಗಳು ನೀರು, ರಸ್ತೆ, ವಿದ್ಯುತ್ ಸಮಸ್ಯೆ ಹೇಳಿದರು ತಿಂಗಳೊಳಗೆ ಸಮಸ್ಯೆ ಬಗೆಹರಿಸಲು ಸೂಚನೆ

- ಅಧಿಕಾರಿಗಳಿಗೆ ತಿಂಗಳ ಗಡುವು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 57 ಹಾಡಿಗಳಿವೆ. ಎಲ್ಲಾ ಹಾಡಿಗಳಿಗೂ ಭೇಟಿ ನೀಡಿ ಸಮಸ್ಯೆ ಆಲಿಸಲಾಗುವುದು ಎಂದು ಶಾಸಕ ಮಂತರ್ ಗೌಡ ಹೇಳಿದರು. ‘ಹೆಚ್ಚಿನ ಮಂದಿಗೆ ಕೆಲವು ತಾಂತ್ರಿಕ ದೋಷಗಳಿಂದ ಆಧಾರ್‌ ಕಾರ್ಡ್ ಸಿಕ್ಕಿಲ್ಲ. ಆಧಾರ್ ಕಾರ್ಡ್ ಇಲ್ಲದೆ ಸರ್ಕಾರದ ಸೌಲಭ್ಯಗಳಿಂದಲೂ ವಂಚಿತವಾಗಿದ್ದಾರೆ. ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಕೆಲಸ ಮಾಡಬೇಕು. ತಮ್ಮ ಕೈಲಾದ ಸಹಾಯವನ್ನು ಗಿರಿಜನ ಕುಟುಂಬಗಳಿಗೆ ಮಾಡಬೇಕಿದೆ. ಅಧಿಕಾರಿಗಳಿಗೆ ಎಲ್ಲಾ ಸಮಸ್ಯೆಗಳ ಬಗ್ಗೆ ಮನವರಿಕೆಯಾಗಿದೆ. ಇನ್ನು ಒಂದು ತಿಂಗಳ ಒಳಗೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸವನ್ನು ಪೂರೈಸಬೇಕು. ಆಧಾರ್ ಕಾರ್ಡ್ ಪಡಿತರ ಚೀಟಿ ಮೊದಲು ಗಿರಿಜನರಿಗೆ ಸಿಗವಂತಾಗಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.