ಶನಿವಾರಸಂತೆ: ಊರುಡುವೆ ಜಾಗದಲ್ಲಿ ನೆಲೆಸಿರುವ ಜನರಿಗೆ ಹಕ್ಕುಪತ್ರ ನೀಡಲು ಅರಣ್ಯ ಹಕ್ಕು ಸಮಿತಿ ಸ್ಥಾಪನೆ ಮಾಡಲು ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಗ್ರಾಮ ಸಭೆ ನಿರ್ಣಯ ಕೈಗೊಂಡಿತು.
ಅಧ್ಯಕ್ಷೆ ಸತ್ಯವತಿ ದೇವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರೇಗೌಡ ಮಾತನಾಡಿ, ‘ಊರುಡುವೆ ಜಾಗದ ಜನರು ಮೂಲ ನಿವಾಸಿಗಳಾಗಿದ್ದಾರೆ. ಅವರಿಗೆ ನೆಲೆಸಿರುವ ಜಾಗಕ್ಕೆ ಹಕ್ಕುಪತ್ರ ನೀಡಿ’ ಎಂದು ಆಗ್ರಹಿಸಿದರು.
ಕೂಜಗೇರಿ ಕೆ.ಟಿ.ಹರೀಶ್ ಮಾತನಾಡಿ, ‘94 ಸಿ ಅರ್ಜಿ ನೀಡಿದ ಫಲಾನುಭವಿಗಳಿಗೆ ದುಂಡಳ್ಳಿ ವ್ಯಾಪ್ತಿಯಲ್ಲಿ ಹಕ್ಕು ಪತ್ರ ನೀಡಲು ವಿಳಂಬವಾಗುತ್ತಿದೆ ಇದರ ಬಗ್ಗೆ ಕಂದಾಯ ಇಲಾಖೆಯವರು ತಕ್ಷಣ ಹಕ್ಕು ಪತ್ರ ನೀಡಲು ಕ್ರಮವಹಿಸಬೇಕು’ ಎಂದು ಮನವಿ ಮಾಡಿದರು.
ಅರಣ್ಯ, ತೋಟಗಾರಿಕೆ, ಸೆಸ್ಕ್ ಸೇರಿದಂತೆ ಹಲವು ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಯೋಜನೆಯ ಮಾಹಿತಿಯನ್ನು ಸಭೆಯಲ್ಲಿ ನೀಡಿದರು. ಈ ವೇಳೆ ಗ್ರಾಮಸ್ಥರು ಯೋಜನೆಗಳ ಫಲಾನುಭವಿಗಳ ಮಾಹಿತಿ ನೀಡುವಂತೆ ಆಗ್ರಹಿಸಿದರು. ಅರ್ಹರಿಗೆ ಯೋಜನೆಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರೈತರಿಗೆ ಗಿಡಗಳನ್ನು ವಿತರಿಸುವಾಗ ಅರ್ಹ ಫಲಾನುಭವಿಗಳಿಗೆ ಜೇಷ್ಠತೆ ನಿಯಮ ಅನ್ವಯಿಸಲೂ ನಿರ್ಣಯಿಸಲಾಯಿತು.
ಸುಳಿಗಳೆಲೆ ಕಾಲೋನಿಯ ಪಾಪು ಮಾತನಾಡಿ, ‘ದುಂಡಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಕ್ರಮವಹಿಸಬೇಕು’ ಎಂದು ತಿಳಿಸಿದರು.
ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಲನ ಭರತ್, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಗೋಪಿಕ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.