ಮಡಿಕೇರಿ: ಕರಗೋತ್ಸವ ಹಾಗೂ ದಶಮಂಟಪಗಳ ಶೋಭಾಯಾತ್ರೆ ಸಂಬಂಧ ಶಾಸಕ ಡಾ.ಮಂತರ್ಗೌಡ ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಕರಗೋತ್ಸವ ಸಮಿತಿ, ದಶಮಂಟಪಗಳ ಸಮಿತಿಯ ಮುಖಂಡರೊಂದಿಗೆ ನಗರದ ಹಲವೆಡೆ ಬುಧವಾರ ಪರಿಶೀಲನೆ ನಡೆಸಿದರು.
ಕರಗೋತ್ಸವ ಆರಂಭವಾಗುವ ಪಂಪಿನಕೆರೆಗೆ ಭೇಟಿ ನೀಡಿದ ಅವರು, ‘ಕರಗೋತ್ಸವವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ವರ್ಷದ ನ್ಯೂನತೆಗಳನ್ನು ಗಮನದಲ್ಲಿಟ್ಟುಕೊಂಡು ಅದು ಮತ್ತೆ ಮರುಕಳಿಸದಂತೆ ತಡೆಯಬೇಕು. ಮಾತ್ರವಲ್ಲ, ಈ ವರ್ಷ ಇನ್ನಷ್ಟು ಹೆಚ್ಚಿನ ಅನುಕೂಲ ಮಾಡಿಕೊಡುವ ಕುರಿತು ಚಿಂತಿಸಿ, ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಅವರು ಪಂಪಿನಕೆರೆಯ ಗೇಟ್ನಿಂದ ಮಂಟಪದವರಗೆ ತೆರಳುವ ಮಾರ್ಗದಲ್ಲಿ ಬಲಭಾಗದಲ್ಲಿ ತಡೆಗೋಡೆ, ಚರಂಡಿಗಳಿಗೆ ಸ್ಲ್ಯಾಬ್ಗಳ ಅಳವಡಿಕೆ ಸೇರಿದಂತೆ ಹಲವು ಹತ್ತು ಸೂಚನೆಗಳನ್ನು ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಸ್ತೆಗುಂಡಿಗಳನ್ನು ಮುಚ್ಚಲು ಹಣ ತೆಗೆದಿರಿಸಲಾಗಿದೆ. ಆದರೆ, ಮಳೆ ಬಿಡುವು ನೀಡುತ್ತಿಲ್ಲ. ಒಂದು ವೇಳೆ ಮಳೆ ಇರುವ ಇಂತಹ ಸಮಯದಲ್ಲಿ ಮುಚ್ಚಿದರೆ ಬಹುಬೇಗನೇ ಕೊಚ್ಚಿಕೊಂಡು ಹೋಗುತ್ತದೆ. ಹಾಗಾಗಿ, ಮಳೆ ನಿಂತು ಬಿಸಿಲು ಬರುವುದನ್ನೇ ಕಾಯುತ್ತಿದ್ದೇವೆ’ ಎಂದು ಹೇಳಿದರು.
ಗುಂಡಿ ಮುಚ್ಚುವ ಕಾರ್ಯ ಕೇವಲ ದಸರೆಗೆ ಮಾತ್ರ ಸೀಮಿತವಾಗದೇ, ದಸರೆಯ ನಂತರವೂ ದೀರ್ಘ ಕಾಲದವರೆಗೆ ಸಾರ್ವಜನಿಕರಿಗೆ ಅನುಕೂಲಕ್ಕೆ ಬರಬೇಕು. ಇಂತಹ ಕಾಮಗಾರಿ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮುಖಂಡರಾದ ಪ್ರಕಾಶ್ ಆಚಾರ್ಯ, ಅರುಣ್ಶೆಟ್ಟಿ, ತೆನ್ನೀರಾ ಮೈನಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.