ಸುಂಟಿಕೊಪ್ಪ: ಮನೆ ಮುಂಭಾಗ ವಾಯುವಿಹಾರ ಮಾಡುತ್ತಿದ್ದ ಕಾಫಿ ಬೆಳೆಗಾರರೊಬ್ಬರ ಮೇಲೆ ಒಂಟಿಸಲಗ ದಾಳಿ ಮಾಡಲು ಮುಂದಾಗಿದ್ದು, ಸಮಯಪ್ರಜ್ಞೆಯಿಂದ ಓಡಿ ತಪ್ಪಿಸಿಕೊಂಡ ಘಟನೆ ಕೊಡಗರಹಳ್ಳಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಗ್ರಾಮದ ಲಕ್ಷ್ಮಿ ತೋಟದ ಮಾಲೀಕ ಬಿ.ಡಿ.ಸುಭಾಷ್ ಪಾರಾದ ಮಾಲಿಕ. ಇದೇ ವೇಳೆ ಆಕ್ರೋಶಗೊಂಡ ಒಂಟಿಸಲಗ ಘೀಳಿಡುತ್ತಾ ಮುಂದೆ ಸಾಗಿದೆ. ಅಲ್ಲಿದ್ದ ಜನರ ಕೂಗಾಟ, ನಾಯಿಗಳ ಚೀರಾಟದಿಂದ ಹೆದರಿದ ಕಾಡಾನೆ ರಸ್ತೆ ದಾಟಿ ತೋಟದೊಳಗೆ ಕಣ್ಮರೆಯಾಗಿದೆ.
ಈ ನೇರ ದೃಶ್ಯವನ್ನು ಕಂಡ ಜನರು ಆತಂಕಗೊಂಡಿದ್ದರು. ಕೆಲವು ವರ್ಷಗಳಿಂದ ಸಿದ್ದಾಪುರ ಭಾಗದಲ್ಲಿ ಹೆಚ್ಚಾಗಿ ದಾಳಿ ನಡೆಸುತ್ತಿದ್ದ ಕಾಡಾನೆಗಳು ಇದೀಗ ಸುಂಟಿಕೊಪ್ಪ ಹೋಬಳಿ ಕೊಡಗರಹಳ್ಳಿ ಉಪ್ಪು ತೋಡು, ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು, ಕೆದಕಲ್, ಹೊರೂರು ವ್ಯಾಪ್ತಿಯಲ್ಲಿ ಹಗಲು ರಾತ್ರಿ ಎನ್ನದೆ ಸಂಚರಿಸಿ ಭೀತಿಯ ವಾತಾವರಣವನ್ನೇ ಸೃಷ್ಟಿಸುತ್ತಿವೆ. ಕೂಡಲೇ ಅರಣ್ಯ ಇಲಾಖೆ ಪರಿಹರಿಬೇಕಾಗಿದೆ.
ಮತ್ತೊಂದೆಡೆ ಕ್ಷಿಪ್ರ ಕಾರ್ಯಪಡೆ ತಮಗೆ ವಹಿಸಿಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಆದರೆ,
ದುರಾದೃಷ್ಟವಶಾತ್ ಅರಣ್ಯ ಇಲಾಖೆಯಿಂದ ಕಾಡಾನೆಗಳನ್ನು ಓಡಿಸುವ ಕಾರ್ಯವನ್ನು ನಡೆಸಿದರೂ ಕೂಡ ಮರುದಿನ ಅದೇ ಸ್ಥಳದಲ್ಲಿ ಮತ್ತೇ ಪ್ರತ್ಯಕ್ಷವಾಗುತ್ತಿವೆ.
ಈ ವ್ಯಾಪ್ತಿಯಲ್ಲಿ ಸರಿಸುಮಾರು 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅವುಗಳನ್ನು ಸೆರೆ ಹಿಡಿದು ಪಳಗಿಸುವ ಕೆಲಸ ಮಾಡಬೇಕಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.