ಶನಿವಾರಸಂತೆ: ‘ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ’ ಎಂದು ಶನಿವಾರಸಂತೆ ಭಾರತಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಚಂದ್ರಕಾಂತ್ ಅಭಿಪ್ರಾಯಪಟ್ಟರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರಸಂತೆ ಕೆಂಪೇಗೌಡ ಜಯಂತೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ನಿರ್ಮಾಪಕ ಹಾಗೂ ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಬೆಂಗಳೂರು ವಿಶ್ವಮಟ್ಟದಲ್ಲಿ ಸಮೃದ್ದಿಗೊಳ್ಳುತ್ತಿರುವುದಕ್ಕೆ ಕಾರಣಕರ್ತರಾದ, ಬೆಂಗಳೂರನ್ನು ಕಟ್ಟಿದ, ಕೆರೆಗಳನ್ನು ನಿರ್ಮಿಸಿದ ಅಭಿವೃದ್ದಿಯ ಹರಿಕಾರ ಕೆಂಪೇಗೌಡರನ್ನು ನಾವೆಲ್ಲರೂ ಸದಾ ಸ್ಮರಿಸಬೇಕು ಎಂದರು.
ಕೆಂಪೇಗೌಡರು ಬೆಂಗಳೂರನ್ನು ಮಾತ್ರ ಕಟ್ಟಲಿಲ್ಲ ಕೆರೆಗಳನ್ನು ನಿರ್ಮಿಸಿ ಅಭಿವೃದ್ದಿಯ ಹರಿಕಾರರೆನ್ನಿಸಿದ್ದಾರೆ. ಇಂದು ಬೆಂಗಳೂರು ನಗರದಲ್ಲಿ ರಾಜ್ಯ, ರಾಷ್ಟ್ರ ಮತ್ತು ವಿದೇಶಗಳಿಂದ ಬಂದು ಜನರು ನೆಲಸಿದ್ದಾರೆ. ಬೆಂಗಳೂರಿನಲ್ಲಿ ಸಮೃದ್ದಿಯ ಜೊತೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಕಾರಣದಿಂದ ನಾವೆಲ್ಲಾರೂ ಕೆಂಪೇಗೌಡರನ್ನು ಆದರ್ಶಪ್ರಾಯವನ್ನಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ರಘು ಮಾತನಾಡಿ, ‘ಕೆಂಪೇಗೌಡರು ಬೆಂಗಳೂರನ್ನು ಕಟ್ಟುವ ಸಂದರ್ಭದಲ್ಲಿ ಒಂದು ಜಾತಿಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳದೆ ಹದಿನೆಂಟು ಜಾತಿ ಜನಾಂಗದವರನ್ನು ಪರಿಗಣನೆಗೆ ತೆಗೆದುಕೊಂಡು ಬೆಂಗಳೂರನ್ನು ಕಟ್ಟಿದ್ದಾರೆ’ ಎಂದರು.
ಹಿರಿಯ ಮುಖಂಡ ಎ.ಎಂ.ಆನಂದ್, ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಜೆ.ಗಿರೀಶ್, ಶನಿವಾರಸಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಆಹಮ್ಮದ್, ಮುಖಂಡರಾದ ರಾಮಚಂದ್ರೇಗೌಡ, ಎಚ್.ಆರ್ ಪ್ರಭಾಕರ್, ಮಯನೂರು ಯೋಗಾನಂದ್, ಎಚ್.ಆರ್.ಹರೀಶ್ಕುಮಾರ್, ಮಾಜಿ ಸೈನಿಕ ಶಿವರಳ್ಳಿ, ಪರಮೇಶ್, ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಕಿರಣ್, ಯೋಗೇಶ್, ಯತೀಶ್, ದಿನೇಶ್, ಕೇಶವಮೂರ್ತಿ, ರಮೇಶ್, ಕೃಷ್ಣಮೂರ್ತಿ, ಸತೀಶ್ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.