ಗೋಣಿಕೊಪ್ಪಲು: ಇಲ್ಲಿನ ಬೈಪಾಸ್ ರಸ್ತೆಯಲ್ಲಿರುವ ನಂದಿ ಪೈಂಟ್ಸ್ ಅಂಗಡಿಗೆ ಶನಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿತು.
ಗೌತಮ್ ಚೌದ್ರಿ ಎಂಬುವವರಿಗೆ ಸೇರಿದ ಬಣ್ಣದ ಅಂಗಡಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಂಗಡಿ ಮಾಲೀಕ ಶನಿವಾರ ಸಂಜೆ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. 9 ಗಂಟೆ ವೇಳೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸಾರ್ವಜನಿಕರು ನೋಡುತ್ತಿದ್ದಂತೆ ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರ ಹಬ್ಬಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬರುವ ವೇಳೆಗೆ ಬೆಂಕಿ ಸಂಪೂರ್ಣವಾಗಿ ಅಂಗಿಯನ್ನು ವ್ಯಾಪಿಸಿಕೊಂಡಿತ್ತು.
ಬಳಿಕ ನೀರು ಹಾಯಿಸಿ ಬೆಂಕಿಯನ್ನು ತಹಬಂದಿಗೆ ತರುವ ವೇಳೆಗೆ ಬಣ್ಣದ ಡಬ್ಬ, ಇತರ ಸಾಮಾಗ್ರಿಗಳು ಸುಟ್ಟು ಕರಕಲಾಗಿದ್ದವು. ಅಗ್ನಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಶಾಸಕ ಎ.ಎಸ್.ಪೊನ್ನಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿ ಅನಾಹುತಕ್ಕ ಕಾರಣ ತಿಳಿದು ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಸಿಪಿಐ ಶಿವರಾಜ್ ಮುಧೋಳ್, ಪಿಎಸ್ಐ ರೂಪಾದೇವಿ ಬಿರಾದಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಒಂದು ವರ್ಷದ ಅವಧಿಯಲ್ಲಿ ಇದು 2ನೇ ಪ್ರಕರಣವಾಗಿದೆ. ಮುಖ್ಯರಸ್ತೆಯಲ್ಲಿನ ಬೇರು ಬಣ್ಣದ ಅಂಗಡಿಯೂ ಹಿಂದೆ ಬೆಂಕಿಗೆ ಆಹುತಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.