ಕುಶಾಲನಗರ: ಪಟ್ಟಣದ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ‘ಬೆಂಕಿ ರಹಿತ ಅಡುಗೆ ಮಾಡುವ ಸ್ಪರ್ಧೆ’ ನಡೆಯಿತು.
ಪ್ರಾಂಶುಪಾಲ ಬಿ.ಎಂ. ಪ್ರವೀಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಅಭಿವ್ಯಕ್ತಪಡಿಸುವ ದೃಷ್ಟಿಯಿಂದ ಬೆಂಕಿ ರಹಿತ ಅಡುಗೆ ಸ್ಪರ್ಧೆ ಆಯೋಜಿಸಿದ್ದೆವು’ ಎಂದರು.
ಕಾಲೇಜಿನ ವಿದ್ಯಾರ್ಥಿಗಳು ತಮಗೆ ತೋಚಿದಂತಹ ತಿನಿಸುಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕೆ ಇಟ್ಟಿದ್ದರು.
ಇತ್ತೀಚಿನ ದಿನಗಳಲ್ಲಿ ಮನೆಯ ಹೊರಗಡೆ ಮಾರುವ ತಿಂಡಿ ತಿನಿಸುಗಳನ್ನು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂಥವುಗಳಿಂದ ದೂರವಿದ್ದು, ಆದಷ್ಟು ಜಂಕ್ಫುಡ್ಗೆ ವಿದಾಯ ಹೇಳಿ, ಪೌಷ್ಠಿಕಾಂಶವುಳ್ಳ ತರಕಾರಿಯಿಂದ ತಯಾರಿಸಿದ ತಿನಿಸನ್ನು ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಿ ಎಂಬ ಸಂದೇಶವನ್ನು ವಿದ್ಯಾರ್ಥಿಗಳು ತಮ್ಮ ಅಡುಗೆ ಮೂಲಕವೇ ಸಾರಿದರು.
ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ತಿನಿಸುಗಳನ್ನು ಪರಿಶೀಲಿಸಿ, ರುಚಿ ಆಸ್ವಾದಿಸುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.
ಕಾಲೇಜಿನ ಸಹ ಪ್ರಾಧ್ಯಾಪಕರಾದ ಬಿ.ಡಿ.ಹರ್ಷ, ಸುನಿಲ್ ಕುಮಾರ್, ಸುಧಾಕ್, ಕುಸುಮಾ, ದೀಪಾ, ವಂದನಾ, ಉಪನ್ಯಾಸಕರಾದ ರಾಜೇಶ್, ಗಿರೀಶ್, ಸಿದ್ದಪ್ಪಾಜಿ, ಚರಣ್ ರಾಜ್, ನಟರಾಜ್, ಸುಚಿತ್ರಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.