ಸೋಮವಾರಪೇಟೆ: ತಾಲ್ಲೂಕಿನ ಸಜ್ಜಳ್ಳಿ ಹಾಡಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ.
ಗಂಡು ಮತ್ತು ಹೆಣ್ಣಾನೆ ಎರಡು ನಿರಂತರವಾಗಿ ಹಾಡಿಗೆ ದಾಳಿ ಇಡುತ್ತಿವೆ. ಗಂಡಾನೆ ಮದ ಏರಿರುವಂತೆ ಕಂಡುಬಂದಿದ್ದು, ಎಲ್ಲೆಡೆ ದಾಳಿ ನಡೆಸಿ ನಷ್ಟಪಡಿಸುತ್ತಿವೆ. ಕರಿಯಪ್ಪ ಎಂಬುವವರು ವಾಸಿಸುತ್ತಿರುವ ಟೆಂಟ್ ಮನೆಗೆ ದಾಳಿ ಮಾಡಿದೆ.
ಒಳಗೆ ಇದ್ದ ಕರಿಯಪ್ಪಅವರು ಪಾರಾಗಿದ್ದಾರೆ. ಶಿವು ಎಂಬುವವರ ಬೈಕು ತುಳಿದು ಜಖಂಗೊಳಿಸಿದೆ. ಶ್ಯಾಮ್ ಎಂಬುವವರಿಗೆ ಸೇರಿದ ನೀರಿನ ಸಿಂಟೆಕ್ಸ್ ಟ್ಯಾಂಕ್ಗೆ ತಿವಿದು ಹಾನಿಗೊಳಿಸಿದೆ. ಎರಡು ದಿನಗಳ ಹಿಂದೆ ಲಿಂಗಪ್ಪ ಎಂಬುವವರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಂದಿಯ ಮೇಲೆ ದಾಳಿ ಮಾಡಲು ಮುಂದಾದಾಗ ಹಂದಿ ಹಗ್ಗ ಕಿತ್ತುಕೊಂಡು ಓಡಿ ತಪ್ಪಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದರು.
ಕಾಡಿಗೆ ಸುಮಾರು 7 ಕಿ.ಮೀ ರೈಲ್ವೇ ಬ್ಯಾರಿಕೇಡ್ ನಿರ್ಮಿಸಿದ್ದು, ಎಲ್ಲೆಡೆ ಮುಚ್ಚಲಾಗಿದೆ. ಆದರೆ, ಸಜ್ಜಳ್ಳಿ ಹಾಡಿಯ ಬಳಿ ಮಾತ್ರ ಗೇಟ್ ಬಿಟ್ಟಿರುವುದರಿಂದ ಇಲ್ಲಿಂದ ಕಾಡಾನೆಗಳು ಹೊರಗೆ ಬರಲು ಅವಕಾಶವಾಗಿದೆ. ಇದು ಸ್ಥಳೀಯರಿಗೆ ತೊಂದರೆಯಾಗಿದೆ.
ಆನೆಗಳು ಇಲ್ಲಿಂದ ಹೊರಗೆ ಬಂದು ಮತ್ತೆ ಕಾಡಿಗೆ ಹಿಂದಿರುತ್ತಿವೆ. ಬಂದು ಹೋಗುವ ನಡುವೆ ಗ್ರಾಮದಲ್ಲಿ ಸಾಕಷ್ಟು ಹಾನಿಯಾಗುತ್ತಿದೆ. ಮನೆಗಳ ಬಳಿಯಲ್ಲಿ ರಾತ್ರಿ ಸಂಚರಿಸುವುದರಿಂದ ಮನೆಯಿಂದ ಹೊರಗೆ ಬರಲು ಹೆದರಿಕೆಯಾಗುತ್ತಿದೆ. ಮನೆಯ ಬಳಿಯಲ್ಲಿ ಕೆಲವೊಮ್ಮೆ ನಿಂತಿರುತ್ತವೆ. ಜೀವ ಹಾನಿಯಾಗುವ ಮುನ್ನ ಕಾಡಾನೆಗಳನ್ನು ನಿಯಂತ್ರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹಾಡಿಗಳ ನಿವಾಸಿಗಳಿಗೆ ತಮ್ಮ ಕೃಷಿ ಜಮೀನು ಮತ್ತು ಮನೆಗಳಿಗೆ ಸೂಕ್ತ ದಾಖಲಾತಿ ಇಲ್ಲದ ಕಾರಣ, ಸರ್ಕಾರದ ಯಾವುದೇ ಯೋಜನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಡಿಗಳ ನಿವಾಸಿಗಳಿಗೆ ಕೂಡಲೇ ಸೂಕ್ತ ದಾಖಲಾತಿ ಮಾಡಿಕೊಡಬೇಕೆಂದು ತಾಲ್ಲೂಕು ಜೇನು ಕುರುಬ ಯುವ ಸೇವಾ ಸಮಿತಿ ಅಧ್ಯಕ್ಷ ಸಜ್ಜಳ್ಳಿ ಜೆ.ಎ. ಶ್ಯಾಮ್ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.