ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಶ್ರೀ ಗಣಪತಿ ದೇವಾಲಯದ ರಥೋತ್ಸವ ಡಿ.1 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಜರುಗಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ. ಇದಕ್ಕಾಗಿ ಭರದಿಂದ ಸಿದ್ಧತಾ ಕಾರ್ಯಗಳು ನಡೆದಿವೆ.
ಕಾರ್ತೀಕ ಮಾಸದ ಕೃಷ್ಣ ಪಕ್ಷದಲ್ಲಿ ಸಲ್ಲುವ ಬಹುಳ ಚತುರ್ಥಿ ಲಗ್ನದಲ್ಲಿ ರಥೋತ್ಸವ ನಡೆಯಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನರು ಸೇರಿದಂತೆ ಕೊಡಗು ಜಿಲ್ಲೆಯ ಜನರು ಪಾಲ್ಗೊಳ್ಳುವರು.
ಗಣಪತಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಅನೇಕ ವರ್ಷಗಳಿಂದ ನಡೆಯುತ್ತಿರುವ ಇತಿಹಾಸ ಪ್ರಸಿದ್ದ ಈ ಜಾತ್ರೆಗಾಗಿ ಗಣಪತಿ ದೇವಸ್ಥಾನ ಹಾಗೂ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣವನ್ನು ಶುಚಿಗೊಳಿಸಲಾಗುತ್ತಿದೆ.
ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ, ಕ್ರೀಡೆ, ಮನೋರಂಜನಾ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ವಿ.ಪಿ.ಶಶಿಧರ್, ವಿ.ಎಸ್.ಆನಂದ್ ಕುಮಾರ್ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಆರ್.ಕೆ.ನಾಗೇಂದ್ರಬಾಬು ದೇವಾಲಯ ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.
ಕುಶಾಲನಗರದ ಹೃದಯ ಭಾಗದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲೇ ಈ ದೇವಾಲಯ ಇದೆ. ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವುದರಿಂದ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಒಮ್ಮೆ ನಮಿಸಿ ಮುಂದುವರೆಯುವುದು ವಾಡಿಕೆ.
ಈಗಾಗಲೇ ದೇಗುಲದಲ್ಲಿ ಧಾರ್ಮಿಕ ಕಾರ್ಯಗಳು ಆರಂಭವಾಗಿವೆ. ಸೋಮವಾರ ಶ್ರೀ ಸತ್ಯನಾರಾಯಣ ಪೂಜೆ, ಮಂಗಳವಾರ ಸ್ವಾಮಿಗೆ ಪಂಚಾಮೃತ ಅಭಿಷೇಕಗಳು, ಬುಧವಾರ ಮೂಷಿಕ ವಾಹನ ಉತ್ಸವಗಳು ನಡೆದಿವೆ.
ನ.30 ರಂದು ಚಂದ್ರಬಿಂಬೋತ್ಸವ, ಡಿ.1 ರಂದು ರಥೋತ್ಸವ ಹಾಗೂ ಪಲ್ಲಕಿ ಉತ್ಸವ, ಡಿ.2 ರಂದು ಮಂಟಪೋತ್ಸವ, 3 ರಂದು ಹೂವಿನ ಪಲ್ಲಕ್ಕಿ ಮಂಟಪೋತ್ಸವ, 4 ರಂದು ಅನ್ದೋಲಿಕೋತ್ಸವ, ಡೋಲೋತ್ಸವ, 5 ರಂದು ತೆಪ್ಪೋತ್ಸವ (ಕಾವೇರಿ ನದಿಯಲ್ಲಿ) ಹಾಗೂ ರಾತ್ರಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ರಥೋತ್ಸವದ ಅಂಗವಾಗಿ ಅನ್ನಸಂತರ್ಪಣಾ ಸಮಿತಿ ವತಿಯಿಂದ ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಜಾತ್ರೆ ಪ್ರಯುಕ್ತ ನಡೆಯುವ ದನಗಳ ಜಾತ್ರೆಗೂ ಶತಮಾನಗಳ ಇತಿಹಾಸ ಇದೆ. ಈಗ ದನಗಳ ಸಂಖ್ಯೆ ಕಡಿಮೆ ಆಗಿರುವುದರಿಂದ ದನಗಳ ಜಾತ್ರೆ, ಜಾನುವಾರು ಪ್ರದರ್ಶನವಾಗಿ ಪರಿವರ್ತನೆಗೊಂಡಿದೆ. ಉತ್ತಮ ತಳಿಯ ಜಾನುವಾರುಗಳಿಗೆ ಬಹುಮಾನ ಕೊಟ್ಟು ಪ್ರೋತಾಹಿಸಲಾಗುತ್ತದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ನೇತೃತ್ವದಲ್ಲಿ ಸಮಿತಿಯ ಸದಸ್ಯರು ರಥೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದು ಸಕಲ ಸಿದ್ದತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
‘ಯಾವುದೇ ವಿಘ್ನವಿಲ್ಲದೆ ವಿಜೃಂಭಣೆಯಿಂದ ರಥೋತ್ಸವ ಕಾರ್ಯ ನೆರವೇರಿಸಲು ಸಕಲ ಸಿದ್ದತೆಗಳನ್ನೂ ಕೈಗೊಳ್ಳಲಾಗುತ್ತಿದೆ’ ಎಂದು ದೇವಾಲಯ ಸಮಿತಿ ಕಾರ್ಯಾಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದ್ದಾರೆ.
ಸಮಿತಿಯ ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ನಿರ್ದೇಶಕರಾದ ವಿ.ಡಿ.ಪುಂಡಾರೀಕಾಕ್ಷ, ವಿ.ಪಿ.ಶಶಿಧರ್, ಜಿ.ಎಲ್.ನಾಗರಾಜು, ಎಂ.ವಿ.ನಾರಾಯಣ್, ಕಾಯಂ ಆಹ್ವಾನಿತ ಟಿ.ಆರ್.ಶರವಣಕುಮಾರ್, ವಿಶೇಷ ಆಹ್ವಾನಿತರಾದ ಕೆ.ಎನ್.ದೇವರಾಜು, ಎಚ್.ಎಂ.ಚಂದ್ರು, ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ, ವೈ.ಆರ್.ನಾಗೇಂದ್ರ, ಡಿ.ಸಿ.ಜಗದೀಶ್, ಕೆ.ಎನ್.ಸುರೇಶ್, ಕೆ.ಸಿ.ನಂಜುಂಡ ಸ್ಚಾಮಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಗುಲದಲ್ಲಿ ಈಗಾಗಲೇ ಆರಂಭವಾಗಿವೆ ಸಿದ್ಧತಾ ಕಾರ್ಯ ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನದಾನ ಡಿ.5ರಂದು ನಡೆಯಲಿದೆ ತೆಪ್ಪೋತ್ಸವ
ದೇವಸ್ಥಾನಕ್ಕಿದೆ ಐತಿಹಾಸಿಕ ಹಿನ್ನೆಲೆ ಚೋಳರ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ ಎನ್ನಲಾಗಿದೆ. 1700ರ ಸುಮಾರಿನಲ್ಲೇ ಈ ದೇವಾಲಯ ಇತ್ತು ಎನ್ನುವುದಕ್ಕೆ ಕೊಡಗು ಗೆಜೆಟಿಯರ್ನಲ್ಲಿ ಉಲ್ಲೇಖಗಳಿವೆ. ಹೈದರಾಲಿ ಕೊಡಗಿನ ಕಡೆ ದಂಡೆತ್ತಿ ಬಂದಿದ್ದಾಗ ಕೊಡಗಿನ ಅರಸ ದೊಡ್ಡವೀರರಾಜೇಂದ್ರ ಗಡಿಭಾಗ ಕೊಪ್ಪ ಕಾವೇರಿ ನದಿ ಬಳಿ ಹೈದರಾಲಿಯನ್ನು ಯುದ್ಧದಲ್ಲಿ ಸೋಲಿಸಿ ಹಿಮ್ಮೆಟ್ಟಿಸಿದ್ದನಂತೆ. ನಂತರ ಗೆಲುವಿನ ಸಂಭ್ರಮದೊಂದಿಗೆ ಮಡಿಕೇರಿಗೆ ಹಿಂತಿರುಗುತ್ತಿರುವಾಗ ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದ ಎನ್ನುವ ವಿಷಯ ಕೊಡಗು ಗೆಜೆಟಿಯರ್ನಲ್ಲಿ ದಾಖಲಾಗಿದೆ. ಮೊದಲು ಇಲ್ಲಿ ಮೂಲಮೂರ್ತಿಗೆ ಕೇವಲ ಒಂದು ಗುಡಿ ಎದುರಿಗೆ ಗೋಪುರ ಮಾತ್ರ ಇತ್ತು. 1971ರಲ್ಲಿ ಮರದ ಪಟ್ಟಿಗಳನ್ನು ಒಡೆದು ಚಾವಣಿಗೆ ಕಲ್ನಾರ್ ಶೀಟನ್ನು ಹಾಕಲಾಯಿತು. 1990ರ ನಂತರ ದೇವಾಲಯದ ಜೀರ್ಣೋದ್ಧಾರ ಕೆಲಸಗಳು ಶುರುವಾಗಿ ಈಗಿನ ಆಕರ್ಷಕ ರೂಪಕ್ಕೆ ಬಂದು ನಿಂತಿದೆ.
- 22 ಅಡಿ ರಥದಲ್ಲಿ 72 ಅಡಿ ದೇವರ ಚಿತ್ರಗಳ ಕೆತ್ತನೆ! 22 ಅಡಿ ಎತ್ತರದ ಈ ರಥದಲ್ಲಿ ಒಟ್ಟು 72 ದೇವರ ಕೆತ್ತನೆಗಳು ಇವೆ. ₹ 50 ಲಕ್ಷ ವೆಚ್ಚದಲ್ಲಿ 5 ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಗಿದೆ. ಸೋಮವಾರಪೇಟೆಯ ಬೀಟಿಕಟ್ಟೆಯ ಶಿಲ್ಪಿ ಸಿ.ಮಂಜುನಾಥ್ ಆಚಾರ್ಯ ನೇತೃತ್ವದಲ್ಲಿ 12 ಶಿಲ್ಪಿಗಳು ಒಂದು ವರ್ಷ ರಥವನ್ನು ಕೆತ್ತಿದ್ದಾರೆ. ಹೊಯ್ಸಳರ ಕಲಾ ಶೈಲಿ ಹೋಲುವಂತಿರುವ ಕೆತ್ತನೆಗಳಿದ್ದು ಆಧುನಿಕತೆಯ ಮೆರಗು ನೀಡಲಾಗಿದೆ. ರಥದ ಬಹುಭಾಗಕ್ಕೆ ಕಿರಾಲ್ ಭೋಗಿ ಮರ ಬಳಸಲಾಗಿದ್ದು ಚಕ್ರಗಳನ್ನು ಹೆಬ್ಬಲಸಿನ ಮರಗಳಿಂದ ಮಾಡಲಾಗಿದೆ. ಸೂಕ್ಷ್ಮ ಕೆತ್ತನೆ ಹಾಗೂ ವಾಸ್ತುವಿಗೂ ಯೋಗ್ಯವಾದ ಸಾಗುವಾನಿ ಮರದಿಂದ ದೇವಾನುದೇವತೆಗಳ ವಿಗ್ರಹಗಳನ್ನು ಕೆತ್ತಲಾಗಿದ್ದು ಆಕರ್ಷಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.