ADVERTISEMENT

ವಿರಾಜಪೇಟೆಯಲ್ಲಿ ಶೋಭಾಯಾತ್ರೆ ಸಡಗರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 6:21 IST
Last Updated 18 ಸೆಪ್ಟೆಂಬರ್ 2024, 6:21 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ವಿರಾಜಪೇಟೆ: ಪಟ್ಟಣದ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೋತ್ಸವದ ಶೋಭಾಯಾತ್ರೆಯು ಅದ್ದೂರಿಯಾಗಿ ಮಂಗಳವಾರ ರಾತ್ರಿ ನಡೆಯಿತು.

ಪಟ್ಟಣದ ವಿವಿಧ ಭಾಗಗಳ 22 ಗೌರಿ, ಗಣೇಶೋತ್ಸವ ಸಮಿತಿಗಳ ಮಂಟಪಗಳು ಈ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನೂರಾರು ಮಂದಿ ಈ ವಿಜೃಂಭಣೆಯ ಮೆರವಣಿಗೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಭಕ್ತಜನಸ್ತೋಮ ಶ್ರದ್ಧಾಭಕ್ತಿಯಿಂದ ಭಾಗಿಯಾಗಿತ್ತು.

ADVERTISEMENT

ಪಟ್ಟಣದ ಗಡಿಯಾರ ಕಂಬದ ಬಳಿ ಇರುವ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಯನ್ನು ಮಂಗಳವಾರ ರಾತ್ರಿ ವಿವಿಧ ಬಗೆಯ ಧಾರ್ಮಿಕ ವಿಧಿವಿಧಾನಗಳ ನಂತರ ವಿದ್ಯುತ್ ದೀಪ ಹಾಗೂ ಹೂವಿನ ಅಲಂಕೃತ ಮಂಟಪದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಇರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಈಡುಗಾಯಿ ಒಡೆದು, ಕೈಮುಗಿದರು. ಜತೆಗೆ, ಪಟಾಕಿಗಳನ್ನು ಸಿಡಿಸಿದರು. ಬಳಿಕ, ಮೆರವಣಿಗೆಗೆ ವಾದ್ಯತಂಡಗಳು ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಚಾಲನೆ ನೀಡಲಾಯಿತು.

ಗಣಪತಿ ದೇವಾಲಯದ ಉತ್ಸವ ಮೂರ್ತಿಯನ್ನು ಮಂಟಪದಲ್ಲಿ ಇರಿಸಿದ ಬಳಿಕ ಸಂಪ್ರದಾಯದಂತೆ ಪಟ್ಟಣದ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ ಉಳಿದ ಪ್ರಮುಖ 21 ಸಮಿತಿಗಳು ತಮ್ಮ ತಮ್ಮ ಮಂಟಪಗಳಲ್ಲಿ ಮೂರ್ತಿಗಳನ್ನು ಇರಿಸಿ ಮೆರವಣಿಗೆಗೆ ಚಾಲನೆ ನೀಡಿದವು.

ಹೀಗೆ ರಾತ್ರಿ ಪಟ್ಟಣದ 22 ಸಮಿತಿಗಳ ಉತ್ಸವ ಮೂರ್ತಿಯನ್ನು ಹೊತ್ತ ವಿದ್ಯುತ್ ಅಲಂಕೃತ ಮಂಟಪಗಳ ವಿವಿಧ ಕಲಾ ತಂಡಗಳು ಹಾಗೂ ವಾದ್ಯವೃಂದಗಳೊಂದಿಗೆ ಮಧ್ಯರಾತ್ರಿಯ ಹೊತ್ತಿಗೆ ಪಟ್ಟಣದ ಮುಖ್ಯರಸ್ತೆಯನ್ನು ಪ್ರವೇಶಿಸಿದವು. ಈ ಸಂದರ್ಭ ದಾರಿಯುದ್ಧಕ್ಕೂ ಭಕ್ತರು ಉತ್ಸವ ಮೂರ್ತಿಗಳನ್ನು ಹೊತ್ತ ಮಂಟಪಗಳ ಮುಂಭಾಗ ಈಡುಗಾಯಿ ಒಡೆದು ಪೂಜೆ ಸಲ್ಲಿಸುತ್ತಿರುವುದು ಕಂಡು ಬಂತು.

ಪಟ್ಟಣದ ಎಫ್.ಎಂ.ಸಿ ರಸ್ತೆಯ ಮೂಲಕ ದೊಡ್ಡಟ್ಟಿ ಚೌಕಿ, ಜೈನರ ಬೀದಿ ಮೂಲಕ ಸಾಗಿದ ಮೆರವಣಿಗೆಯು ತೆಲುಗರ ಬೀದಿಯ ಕೊನೆಯ ತಿರುವಿನವರೆಗೆ ಸಾಗಿತು. ಬಳಿಕ ಉತ್ಸವ ಸಮಿತಿಗಳ ಹಿರಿತನದ ಆಧಾರದಂತೆ ಮಂಟಪಗಳು ಸಾಲಾಗಿ ಮೆರವಣಿಗೆಯು ಜೈನರ ಬೀದಿ, ಎಫ್.ಎಂ.ಸಿ ರಸ್ತೆ, ಗಡಿಯಾರ ಕಂಬ ಮೂಲಕ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿನ ಗೌರಿಕೆರೆಯ ಕಡೆಗೆ ಶೋಭಾಯಾತ್ರೆಯು ಮುಂದುವರಿಯಿತು.

ವಿವಿಧ ಸಮಿತಿಗಳು ವಿದ್ಯುತ್ ಅಲಂಕೃತ ಮಂಟಪಗಳು, ಹೂವಿನ ಮಂಟಪಗಳೊಂದಿಗೆ ವಾದ್ಯವೃಂದ, ಸಿಡಿಮದ್ದುಗಳ ಪ್ರದರ್ಶನ ಕೀಲುಕುದುರೆ, ಗೊಂಬೆಕುಣಿತ ಸೇರಿದಂತೆ ವಿವಿಧ ಆಕರ್ಷಕ ಕಲಾತಂಡಗೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ನೋಡುಗರ ಕಣ್ಮನ ಸೆಳೆಯಿತು. ವಾದ್ಯವೃಂದಕ್ಕೆ ಯುವಸಮುದಾಯ ವಿವಿಧ ಸಮಿತಿಗಳ ಮಂಟಪಗಳ ಮುಂಭಾಗದಲ್ಲಿ ತಲ್ಲೀನರಾಗಿ ಕುಣಿಯುತ್ತಿರುವುದು ಕಂಡು ಬಂತು.

ಪಟ್ಟಣದಲ್ಲಿ ಮಂಗಳವಾರ ಹಗಲಿಡಿ ಮಳೆ ಬಿಡುವು ನೀಡಿತ್ತು. ಸಾಕಷ್ಟು ಸಂಖ್ಯೆಯಲ್ಲಿ ವಿರಾಜಪೇಟೆ ಪಟ್ಟಣ, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶೋಭಾಯಾತ್ರೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.