ವಿರಾಜಪೇಟೆ: ಪಟ್ಟಣದ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬೆಂಗಳೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಲ್ವರು ಶಿಕ್ಷಕರಿಗೆ ‘ಸುವರ್ಣ ಸಂಭ್ರಮ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
2023-34ನೇ ಸಾಲಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿರಾಜಪೇಟೆ ತಾಲ್ಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾಂಜಲಿ, ಸಮೂಹ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ವಿ.ಟಿ, ವಿರಾಜಪೇಟೆ ಕ್ಲಸ್ಟರ್ ಗಣಿತ ಶಿಕ್ಷಕ ಪಿ.ಆರ್. ಅಯ್ಯಪ್ಪ ಮತ್ತು ವಿರಾಜಪೇಟೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಾಮನ ಟಿ.ಕೆ ಅವರಿಗೆ ಸುವರ್ಣ ಸಂಭ್ರಮ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿನಿ ಆಕಾಂಕ್ಷ ಎ.ಆರ್ ಅವರಿಗೆ ಈ ಸಂದರ್ಭ ‘ಸುವರ್ಣ ಶ್ರೀ ಕನ್ನಡ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಆಕಾಂಕ್ಷ ಅವರು ರತೀಶ್ ಆಚಾರ್ಯ ಮತ್ತು ಪ್ರತಿಮಾ ಆಚಾರ್ಯ ದಂಪತಿಯ ಪುತ್ರಿ.
ಚಲನಚಿತ್ರ ನಟ ದಿ.ಸುಧೀರ್ ಅವರ ಪತ್ನಿ ಮಾಲತಿ ಸುಧೀರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಾ.ಅಶೋಕ್ ಶೆಟ್ಟಿ, ಡಾ.ಕೆಂಚನೂರ್ ಶಂಕರ್, ಖ್ಯಾತ ಗಾಯಕರಾದ ಶಶಿಧರ್ ಕೋಟೆ, ಡಾ.ಮಮತಾ ಅಶೋಕ್, ಡಾ. ಮುನಿರಾಜು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟ್ಯ ಮಯೂರಿ ನೃತ್ಯ ಶಾಲೆಯ ವಿದುಷಿ ಪ್ರೇಮಾಂಜಲಿ ಆಚಾರ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.