ADVERTISEMENT

ಗೋಣಿಕೊಪ್ಪಲು: ವಿಜೃಂಭಣೆಯ ಹುದೂರು ಬೋಡ್ ನಮ್ಮೆ

ಹಳ್ಳಿಗಟ್ಟು, ಹುದೂರು ಗ್ರಾಮದ ಬಾಂದವ್ಯ ಬೆಸೆಯುವ ಹಬ್ಬ

​ಪ್ರಜಾವಾಣಿ ವಾರ್ತೆ
Published 25 ಮೇ 2024, 4:59 IST
Last Updated 25 ಮೇ 2024, 4:59 IST
ಗೋಣಿಕೊಪ್ಪಲು ಬಳಿಯ ಹಳ್ಳಿಗಟ್ಟು ಹುದೂರು ಗ್ರಾಮದಲ್ಲಿ ನಡೆದ ಬೋಡ್ ನಮ್ಮೆಯಲ್ಲಿ ಕೃತಕ ಕುದುರೆ ಹಾಗೂ ಮೊಗಗಳ ಜತೆ ಭಕ್ತರು ಭದ್ರಕಾಳಿ ದೇವಸ್ಥಾನದ ಬಳಿ ಹರಕೆ, ಪೂಜೆ ಪುರಸ್ಕಾರ ನೆರವೇರಿಸಿದರು
ಗೋಣಿಕೊಪ್ಪಲು ಬಳಿಯ ಹಳ್ಳಿಗಟ್ಟು ಹುದೂರು ಗ್ರಾಮದಲ್ಲಿ ನಡೆದ ಬೋಡ್ ನಮ್ಮೆಯಲ್ಲಿ ಕೃತಕ ಕುದುರೆ ಹಾಗೂ ಮೊಗಗಳ ಜತೆ ಭಕ್ತರು ಭದ್ರಕಾಳಿ ದೇವಸ್ಥಾನದ ಬಳಿ ಹರಕೆ, ಪೂಜೆ ಪುರಸ್ಕಾರ ನೆರವೇರಿಸಿದರು   

ಗೋಣಿಕೊಪ್ಪಲು: ಪೊನ್ನಂಪೇಟೆ ಸಮೀಪದ ಹುದೂರು ಭಗವತಿ ಹಾಗೂ ಭದ್ರಕಾಳಿ ದೇವರ ವಾರ್ಷಿಕ ಬೋಡ್ ನಮ್ಮೆ ಗುರುವಾರ ಹಾಗೂ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಹಳ್ಳಿಗಟ್ಟು ಬೋಡ್ ನಮ್ಮೆ ಕಳೆದ ನಂತರ ಪ್ರತಿವರ್ಷ ನಡೆಯುವ ಹುದೂರು ಬೋಡ್ ನಮ್ಮೆಯಲ್ಲಿ ಹುದೂರು ಹಾಗೂ ಹಳ್ಳಿಗಟ್ಟು ಊರಿನ ಜನರು ಭಾಗವಹಿಸುವುದು ವಿಶೇಷ. ಆಸುಪಾಸಿನಲ್ಲಿಯೇ ಈ ಊರುಗಳ ಜನತೆಗೂ ದೇವರಿಗೂ ಅವಿನಾಭಾವ ಸಂಬಂಧವಿದೆ.

ಎರಡು ಊರಿನ ಜನ ಪರಸ್ಪರ ಹಬ್ಬಹರಿದಿನಗಳಲ್ಲಿ ಒಂದಾಗಬೇಕು ಎಂಬ ಅಲಿಖಿತ ನಿಯಮವಿದ್ದು, ಇದನ್ನು ಮೀರಿ ಒಂದಷ್ಟು ವರ್ಷಗಳಿಂದ ಹಬ್ಬಗಳು ಒಂದೇ ದಿನ ನಡೆಯುತ್ತಿದ್ದವು. ಇದೀಗ ಎರಡು ಊರಿನ ಮಂದಿ ಪರಸ್ಪರ ಒಂದಾಗಿ ಹಬ್ಬ ಆಚರಿಸಿದರು.

ADVERTISEMENT

ಇದರಿಂದ ಈ ಹಿಂದಿನ ಕಾಲದಂತೆ ಊರ ಜನರು ಎರಡು ಬೋಡ್ ನಮ್ಮೆಗಳಲ್ಲಿ ಭಾಂದವ್ಯ ಹಂಚಿಕೊಂಡರು. ಕಳೆದ ಮೇ 18 ಹಾಗೂ 19ರಂದು ಹಳ್ಳಿಗಟ್ಟು ಬೋಡ್ ನಮ್ಮೆ ನಡೆದರೆ, ಹುದೂರು ಬೋಡ್ ನಮ್ಮೆ 23 ಹಾಗೂ 24 ರಂದು ಹಾಗೂ  ಗುರುವಾರ ವಿಜೃಂಭಣೆಯಿಂದ ನಡೆಯಿತು.

ಮೊದಲ ದಿನ ಭದ್ರಕಾಳಿ ದೇವರ ಹಬ್ಬ ಆಚರಿಸಲಾಯಿತು. ಎರಡನೆ ದಿನ ಭಗವತಿ ದೇವರಿಗೆ ಕುದುರೆ ಹಾಗೂ ಮೊಗ ಒಪ್ಪಿಸಲಾಯಿತು. 23ರಂದು ಬುಧವಾರ ಅಪರಾಹ್ನ ಅಡ್ಡಂಡ ಬಲ್ಯಮನೆ ಸಮೀಪದ ಅಂಬಲದಿಂದ ಹೊರಟು ಹತ್ತಿರದ ಭದ್ರಕಾಳಿ ದೇವಸ್ಥಾನದಲ್ಲಿ ದೇವರಿಗೆ ಹರಕೆ, ಕಾಣಿಕೆ ಸಲ್ಲಿಸಲಾಯಿತು.

24ರಂದು ಅಡ್ಡಂಡ ಬಲ್ಯಮನೆ ಸಮೀಪದ ಅಂಬಲದಿಂದ ಕುದುರೆ ಹಾಗೂ ಮೊಗ ಹೊರಟು ಸಿಐಟಿ ಕಾಲೇಜು ಸಮೀಪ ಇರುವ ಭಗವತಿ ದೇವಸ್ಥಾನದಲ್ಲಿ ಹರಕೆ ಕಾಣಿಕೆಗಳನ್ನು ಸಲ್ಲಿಸಲಾಯಿತು.

ನಾಡ್ ತಕ್ಕರಾದ ಪ್ರಕಾಶ್ ಕುಶಾಲಪ್ಪ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಡ್ಡಂಡ ಡಾಲಿ ಜನಾರ್ಧನ ಮುಂದಾಳತ್ವದಲ್ಲಿ ಹಬ್ಬ ನಡೆಯಿತು. ದೇವಸ್ಥಾನ ಅಭಿವೃದ್ಧಿ ಸಮೀತಿ ಸದಸ್ಯರು, ಊರು ತಕ್ಕರು ಸೇರಿ ವಿವಿಧ ಕುಟುಂಬಗಳ ಜನರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.