ADVERTISEMENT

ಕುಶಾಲನಗರದಲ್ಲಿ ಧಾರಾಕಾರ ಮಳೆ

ನದಿ, ಹಳ್ಳ–ಕೊಳ್ಳಗಳಲ್ಲಿ ನೀರಿನ‌ ಪ್ರಮಾಣ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2024, 5:10 IST
Last Updated 17 ಮೇ 2024, 5:10 IST
ಕುಶಾಲನಗರ ಪಟ್ಟಣದ ಗಂಧದಕೋಟಿ ಬಳಿ ಕಾರು ಚಾಲಕರು ಮಾಲೀಕರ ಬಡಾವಣೆಯ ತಗ್ಗು ಪ್ರದೇಶ ಜಲಾವೃತಗೊಂಡಿದೆ
ಕುಶಾಲನಗರ ಪಟ್ಟಣದ ಗಂಧದಕೋಟಿ ಬಳಿ ಕಾರು ಚಾಲಕರು ಮಾಲೀಕರ ಬಡಾವಣೆಯ ತಗ್ಗು ಪ್ರದೇಶ ಜಲಾವೃತಗೊಂಡಿದೆ   

ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣ ಇತ್ತು. ಸಂಜೆ ತುಂತುರು ಹಾನಿಗಳೊಂದಿಗೆ ಗಾಳಿ ಸಹಿತ ಮಳೆ ಆರಂಭವಾಯಿತು. ಮಳೆ ಆರಂಭದಲ್ಲಿ ಗಾಳಿ ಆರ್ಭಟ ಜೋರಾಗಿತ್ತು. ಕುಶಾಲನಗರ, ಗುಡ್ಡೆಹೊಸೂರು, ಹಾರಂಗಿ, ಮುಳ್ಳುಸೋಗೆ, ಕೂಡಿಗೆ, ಹೆಬ್ಬಾಲೆ, ಅಳುವಾರ, ಸಿದ್ಧಲಿಂಗಪುರ, ಬಾಣವಾರ, ಅಲೂರು ಸೇರಿದಂತೆ ವಿವಿಧೆಡೆ ಒಂದು ತಾಸಿಗೂ ಹೆಚ್ಚು ಕಾಲ ಜೋರಾಗಿ ಮಳೆ ಸುರಿಯಿತು. ದಿಢೀರನೆ ಬಂದ ಮಳೆಯಿಂದ‌ ಜನಜೀವನ ಅಸ್ತವ್ಯಸ್ಥಗೊಂಡಿತು.

ಕುಶಾಲನಗರದಲ್ಲಿ ಸುರಿದ ಭಾರಿ ಮಳೆಗೆ ಚರಂಡಿಗಳು ತುಂಬಿ ನೀರು ರಸ್ತೆ ಮೇಲೆ ಹರಿಯಿತು. ವಾಹನ ಸಂಚಾರಕ್ಕೆ ಸ್ವಲ್ಪ ತೊಂದರೆ ಆಯಿತು. ನೀರು ತಗ್ಗು ಪ್ರದೇಶಗಳತ್ತ ನುಗ್ಗಿ ಹಳ್ಳ ಪ್ರದೇಶಗಳು ಜಲಾವೃತ್ತಗೊಂಡಿವೆ. ಚರಂಡಿಗಳು ಕಸ, ತ್ಯಾಜ್ಯ ಗಳಿಂದ ತುಂಬಿರುವ ಹಿನ್ನೆಲೆಯಲ್ಲಿ ಬ್ಲಾಕ್ ಆಗಿವೆ. ಪಟ್ಟಣದ ಗಂಧದಕೋಟಿ ಬಳಿ ಕಾರು ಚಾಲಕರು ಮಾಲೀಕರ ಬಡಾವಣೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದ್ದು,
ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿ ನಿವಾಸಿಗಳು ಇದ್ದಾರೆ.

ADVERTISEMENT

ಚರಂಡಿಯಲ್ಲಿ ಸಿಲುಕಿರುವ ತ್ಯಾಜ್ಯ ತೆರವು ಕಾರ್ಯದಲ್ಲಿ ಸ್ಥಳೀಯ ನಿವಾಸಿಗಳು ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ಜಲಾವೃತಗೊಳ್ಳುವ ಬಡಾವಣೆ ಬಗ್ಗೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬಿಸಿಲಿನ ತಾಪಕ್ಕೆ ಸಂಪೂರ್ಣ ಕ್ಷೀಣಿಸಿದ್ದ ನದಿತೊರೆಗಳಲ್ಲಿ ನೀರಿನ ಹರಿವು ಹಾಗೂ ಸಂಗ್ರಹ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಬಿಸಿಲಿನಿಂದ ಬಾಡಿ ಹೋಗಿದ್ದ ಗಿಡಮರಗಳಿಗೆ ನೀರಿನ‌ ಆಸರೆ ಸಿಕ್ಕಿದ್ದು, ಎಲ್ಲೆಡೆ ಹಸಿರುಮಯವಾಗಿದೆ. ನಿರಂತರ ಮಳೆಯಿಂದಾಗಿ ಶುಂಠಿ, ಜೋಳ, ಕೆಸ, ಸುವರ್ಣ ಗೆಡ್ಡೆ, ಕಾಫಿ ತೋಟಗಳಿಗೆ ಅನುಕೂಲವಾಗಿದೆ. ರೈತಾಪಿ ವರ್ಗ ಸಂತಸಗೊಂಡಿದೆ.

ಕುಶಾಲನಗರ ಸಮೀಪ ಕಾವೇರಿ ನದಿಯಲ್ಲಿ ನೀರಿ ಹರಿವಿನ‌ ಪ್ರಮಾಣದಲ್ಲಿ ಏರಿಕೆಯಾಗಿದೆ‌
ಕುಶಾಲನಗರ ಸಮೀಪದ ಕೂಡಿಗೆ ಹಾರಂಗಿ ನದಿ ಸೇತುವೆ ಮೇಲೆ ಮಳೆ ನೀರು ಸಂಗ್ರಹಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.