ADVERTISEMENT

ಹಾಕಿ: ಎಫ್.ಎಂ.ಸಿ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಮೇ 2024, 14:18 IST
Last Updated 23 ಮೇ 2024, 14:18 IST
ಮೂರ್ನಾಡಿನ ಪ್ರಥಮ ದರ್ಜೆ‌ ಕಾಲೇಜು ತಂಡ ದ್ವಿತೀಯ ಸ್ಥಾನ‌ ಪಡೆಯಿತು.
ಮೂರ್ನಾಡಿನ ಪ್ರಥಮ ದರ್ಜೆ‌ ಕಾಲೇಜು ತಂಡ ದ್ವಿತೀಯ ಸ್ಥಾನ‌ ಪಡೆಯಿತು.   

ವಿರಾಜಪೇಟೆ: ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಸಿದ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ತಂಡ ಪ್ರಶಸ್ತಿ ಪಡೆದುಕೊಂಡಿತು.

ಕಾಲೇಜಿನ ಬಿ.ಬಿ.ಎ ಹಾಗೂ ದೈಹಿಕ ಶಿಕ್ಷಣ ವಿಭಾಗದಿಂದ ‌ನಡೆದ ಟೂರ್ನಿಯ ಬುಧವಾರದ ರೋಚಕ ಫೈನಲ್ ಪಂದ್ಯದಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ತಂಡ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡವನ್ನು ಮಣಿಸಿತು.

ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡು ತಂಡಗಳು ಸಮಾನವಾಗಿ ತಲಾ 3 ಗೋಲುಗಳನ್ನು ದಾಖಲಿಸಿ ಸಮಬಲ ಸಾಧಿಸಿದ್ದವು.

ADVERTISEMENT

ನಂತರ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟ್ ಔಟ್ ಮೊರೆ ಹೋದಾಗ ಮಡಿಕೇರಿ ಎಫ್. ಎಂ. ಕೆ. ಎಂ. ಸಿ. ತಂಡವು 6-5 ಗೋಲುಗಳ ಅಂತರದಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೆಂಟ್ ಆನ್ಸ್ ಪಿ.ಯು ಕಾಲೇಜಿನ ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು,‘ಕ್ರೀಡೆ ಪರಸ್ಪರ ಒಗ್ಗಟ್ಟನ್ನು ತರುತ್ತದೆ. ಮಾತ್ರವಲ್ಲದೆ ರಾಷ್ಟ್ರದ ಪ್ರಗತಿಗೆ ಪೂರಕವಾಗಿದೆ’ ಎಂದರು.

ಅಂತಾರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ ಮತ್ತು ವಿರಾಜಪೇಟೆಯ ಪ್ರಗತಿ ಶಾಲೆ ಮುಖ್ಯಸ್ಥ ಮಾದಂಡ ತಿಮ್ಮಯ್ಯ   ಮಾತನಾಡಿ,‘ವಿದ್ಯಾರ್ಥಿಗಳ ಪ್ರತಿಭೆ ರಾಷ್ಟ್ರ ಮಟ್ಟಕ್ಕೂ ವ್ಯಾಪಿಸಬೇಕು. ವಿದ್ಯಾರ್ಥಿಗಳು ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯ’ ಎಂದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಬಿಬಿಎ ವಿಭಾಗದ ಮುಖ್ಯಸ್ಥೆ ಹಾಗೂ ಆಯೋಜಕಿ ಹೇಮ ಬಿ.ಡಿ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ.ರಾಜ ರೈ, ಕಾಲೇಜಿನ ಕ್ರೀಡಾ ನಾಯಕ ತನಿಷ್ ಉಪಸ್ಥಿತರಿದ್ದರು.

ಟೂರ್ನಿಯ ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಮಡಿಕೇರಿ ಎಫ್.ಎಂ.ಕೆ.ಎಂ.ಸಿ ಕಾಲೇಜಿನ ಯಶವಂತ್, ಫೈನಲ್ಸ್  ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮೂರ್ನಾಡು ಕಾಲೇಜಿನ ಸುಬ್ರಮಣಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮಡಿಕೇರಿ ಎಫ್.ಎಂ.ಕೆ.ಎಂ.ಸಿ ಸುಗುಣ್, ಶಿಸ್ತುಬದ್ಧ ಆಟಗಾರ ಪ್ರಶಸ್ತಿಯನ್ನು ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಪೊನ್ನಣ್ಣ  ಪಡೆದುಕೊಂಡರು.

ಪಂದ್ಯಾವಳಿಯ ತೀರ್ಪುಗಾರರಾಗಿ ಕುಪ್ಪಂಡ ದಿಲನ್, ಕೊಡಿಮಣಿಯಂಡ ಅಪ್ಪಣ್ಣ, ಅಪ್ಪಚಟ್ಟೋಳಂಡ ಅಯ್ಯಪ್ಪ, ಕಾಳಿಮಾಡ ಕಿರಣ್ ಕಾರ್ಯನಿರ್ವಹಿಸಿದರು. ಪಂದ್ಯಾಟದ ವೀಕ್ಷಕ ವಿವರಣೆಯನ್ನು ಮೂಕಚಂಡ ಬೊಳ್ಳಮ್ಮ ನೀಡಿದರು.

ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ವತಿಯಿದ ಬುಧವಾರ ‌ನಡೆದ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.

ಈ ಸಂದರ್ಭದ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಜಿಲ್ಲೆಗಳ ಆಟಗಾರರು, ಕ್ರೀಡಾ ನಿರ್ದೇಶಕರು ಉಪಸ್ಥಿತರಿದ್ದರು.

ಅಂತರರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ ಮಾದಂಡ ತಿಮ್ಮಯ್ಯ ಸಮರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.