ADVERTISEMENT

ತೆಲಂಗಾಣದಲ್ಲಿ ಕೊಲೆ, ಸುಂಟಿಕೊಪ್ಪದಲ್ಲಿ ಶವ ದಹನ

4ನೇ ಪತಿಯನ್ನು ಗೆಳೆಯರೊಂದಿಗೆ ಸೇರಿ ಹತ್ಯೆ ಮಾಡಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:23 IST
Last Updated 26 ಅಕ್ಟೋಬರ್ 2024, 15:23 IST
ನಿಹಾರಿಕಾ
ನಿಹಾರಿಕಾ   

ಮಡಿಕೇರಿ: ತನ್ನ 3ನೇ ಪತಿ, ಹೈದರಾಬಾದ್ ನಿವಾಸಿ ರಮೇಶ್‌ಕುಮಾರ್ (54) ಎಂಬವರನ್ನು ತೆಲಂಗಾಣದಲ್ಲಿ ಕೊಂದು, ಶವವನ್ನು ಕೊಡಗು ಜಿಲ್ಲೆಯ ಸುಂಟಿಕೊಪ್ಪಕ್ಕೆ ತಂದು ಸುಟ್ಟು ಹಾಕಿದ ಆರೋಪದಲ್ಲಿ ತೆಲಂಗಾಣದ ಮಹಿಳೆ ನಿಹಾರಿಕಾ (29) ಹಾಗೂ ಆಕೆಯ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ನಿಹಾರಿಕಾ ಸ್ನೇಹಿತರಾದ ಬೆಂಗಳೂರಿನ ಪಶುವೈದ್ಯ ನಿಖಿಲ್ ಮೈರೆಡ್ಡಿ (28), ಹರಿಯಾಣದ ಅಂಕೂರ್‌ ರಾಣಾ (30) ಬಂಧಿತರು. 

‘ನಿಹಾರಿಕಾ ತನ್ನ ಆಸ್ತಿ ಮಾರಾಟದಿಂದ ಬರಬೇಕಿದ್ದ ₹ 8 ಕೋಟಿ ಪಡೆಯಲು ರಮೇಶ್‌ಕುಮಾರ್ ಅವರನ್ನು ಗೆಳೆಯ ಅಂಕೂರ್ ರಾಣಾ ಜೊತೆ ಸೇರಿ ತೆಲಂಗಾಣದಲ್ಲಿ ಕೊಲೆ ಮಾಡಿದ್ದಳು. ನಂತರ ಶವವನ್ನು ಇನ್ನೊಬ್ಬ ಸ್ನೇಹಿತ ನಿಖಿಲ್ ಮೈರೆಡ್ಡಿ ಜೊತೆ ಸೇರಿ ಅ. 8ರಂದು ಸುಂಟಿಕೊಪ್ಪದ ಸಮೀಪಕ್ಕೆ ತಂದು ಸುಟ್ಟಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಎಸ್ಪಿ ಕೆ. ರಾಮರಾಜನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಮೊದಲ ಪತಿಗೆ ವಿಚ್ಛೇದನ ನೀಡಿ ಹರಿಯಾಣದ ವ್ಯಕ್ತಿಯನ್ನು ವಿವಾಹವಾಗಿದ್ದ ನಿಹಾರಿಕಾ ವಿರುದ್ಧ 2ನೇ ಪತಿ ವಂಚನೆ ಪ್ರಕರಣ ದಾಖಲಿಸಿ, ಆಕೆಯನ್ನು ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಆಕೆ ರಮೇಶ್‌ಕುಮಾರ್ ಜೊತೆ ವಿವಾಹವಾಗಿದ್ದಳು. ನಂತರ ಕಂಪನಿಯೊಂದರಲ್ಲಿ ಉದ್ಯೋಗಿ ಸೇರಿ, ಬೆಂಗಳೂರಿನಲ್ಲಿ ನೆಲಸಿದ್ದಳು. ಈ ವೇಳೆ ರಾಮಮೂರ್ತಿ ನಗರದ ಪಶುವೈದ್ಯ ನಿಖಿಲ್ ಜೊತೆ ಗೆಳೆತನ ಬೆಳೆಸಿದ್ದಳು. ಹತ್ಯೆಗೆ ಸಹಕಾರ ನೀಡಿದ ಅಂಕೂರ್ ರಾಣಾನನ್ನು ಹರಿದ್ವಾರದಿಂದ ಬಂಧಿಸಿ ಕರೆ ತರಲಾಯಿತು’ ಎಂದು ಹೇಳಿದರು.

ಡಾ.ನಿಖಿಲ್
ಅಂಕೂರ್‌
ರಮೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.