ADVERTISEMENT

22ರಂದು ಶಿವಯೋಗಿ ಸಿದ್ಧರಾಮೇಶ್ವರ, ಅಂಬಿಗರ ಚೌಡಯ್ಯ ಜಯಂತಿ

ವಿವಿಧ ಮಹನೀಯರ ಜಯಂತ್ಯುತ್ಸವ ಆಚರಣೆ; ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 12:39 IST
Last Updated 13 ಜನವರಿ 2024, 12:39 IST
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು   

ಮಡಿಕೇರಿ: ಶಿವಯೋಗಿ ಸಿದ್ಧರಾಮೇಶ್ವರ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯುಕ್ರಮ ಇಲ್ಲಿನ ಗಾಂಧಿ ಭವನದಲ್ಲಿ ನಡೆಯಲಿದೆ.

ಇಲ್ಲಿ ಈಚೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ‘ಜ. 15ರಂದು ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ, 21ರಂದು ಅಂಬಿಗರ ಚೌಡಯ್ಯ  ಹಾಗೂ ಫೆ. 1ರಂದು ಮಡಿವಾಳ ಮಾಚಿದೇವ ಜಯಂತಿಯೂ ಇದೆ. ಜಿಲ್ಲೆಯಲ್ಲಿ ಇವುಗಳ ಆಚರಣೆಗೆ ದಿನಾಂಕ ನಿಗದಿ ಮಾಡಬೇಕು’ ಎಂದು ಪ್ರಸ್ತಾಪಿಸಿದರು.

ADVERTISEMENT

ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಸುಜೀತ್ ಮಾತನಾಡಿ, ‘ಜ. 15ರಂದು ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ 22ರಂದು ಕಾರ್ಯಕ್ರಮ ಆಯೋಜಿಸಬಹುದು’ ಎಂದು ಸಲಹೆ ನೀಡಿದರು.

ಕಾವೇರಿ ಮೀನುಗಾರರ ಸಂಘದ ಮಾಜಿ ಅಧ್ಯಕ್ಷರಾದ ಇ.ಎಸ್.ಶ್ರೀನಿವಾಸ್ ಮಾತನಾಡಿ, ‘21ರ ಅಂಬಿಗರ ಚೌಡಯ್ಯ ಜಯಂತಿಯನ್ನೂ 22ರಂದೇ ನಡೆಸಬಹುದು’ ಎಂದರು.

ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪಿ.ಜಿ.ಸುಕುಮಾರ್ ಮಾತನಾಡಿ, ‘ಫೆ. 1ರ ಮಡಿವಾಳ ಮಾಚಿದೇವ ಜಯಂತಿಯನ್ನು ಫೆ. 25ರಂದು ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಸಲಹೆಗಳನ್ನು ಒಪ್ಪಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಹಾಗೂ ಅಂಬಿಗರ ಚೌಡಯ್ಯ ಜಯಂತಿಯನ್ನು 22ರಂದು ಹಾಗೂ ಮಡಿವಾಳ ಮಾಚಿದೇವ ಜಯಂತಿಯನ್ನು ಫೆ. 25ರಂದು ನಡೆಸಲು ಒಪ್ಪಿಗೆ ಸೂಚಿಸಿದರು. ಜೊತೆಗೆ, ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಜೊತೆ ಕೈಜೋಡಿಸುವಂತೆಯೂ ಅವರು ವಿವಿಧ ಸಮಾಜಗಳ ಮುಖಂಡರನ್ನು ಕೋರಿದರು.

ಮುಖಂಡರಾದ ಕೆ.ಎಸ್.ಮಹೇಶ್, ವಿನಾಯಕ, ಎಂ.ಕೆ.ಸುಬ್ರಮಣಿ, ಪಿ.ಜಿ.ಮಂಜುನಾಥ, ಪಿ.ಜಿ.ಕಮಲ್, ಎಂ.ಬಿ.ವಿಷ್ಣು, ಚೇತನ್ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.