ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಸೋಮವಾರ ಬೆಳಿಗ್ಗೆಯಿಂದಲೂ ರಭಸದ ಮಳೆ ಸುರಿಯಿತು.
ದಟ್ಟ ಮೋಡ ಕವಿದ ವಾತಾವರಣದಲ್ಲಿ ನಿರಂತರವಾಗಿ ಸುರಿದ ಮಳೆಗೆ ತೊರೆ ತೋಡುಗಳು ತುಂಬಿ ಹರಿಯುತ್ತಿವೆ. ಕೀರೆಹೊಳೆ, ಲಕ್ಷ್ಮಣತೀರ್ಥ, ಬರಪೊಳೆ, ಕಕ್ಕಟ್ಟು ಹೊಳೆ ಮೊದಲಾದವು ಮೈ ದುಂಬಿ ಹರಿಯುತ್ತಿವೆ. ಹಳ್ಳದ ಗದ್ದೆ ಬಯಲು ಮಳೆ ನೀರಿನಿಂದ ತುಂಬಿ ಸಾಗರದಂತೆ ಕಂಡು ಬರುತ್ತಿವೆ. ಪೊನ್ನಂಪೇಟೆ, ಹುದಿಕೇರಿ ನಡುವಿನ ಬೇಗೂರು ಕೊಲ್ಲಿಯಲ್ಲಿ ನೀರು ಸಂಗ್ರಹಗೊಂಡು ಸಾಗರವನ್ನೇ ಸೃಷ್ಟಿಸಿದೆ.
ಮಳೆ ನಿರಂತರವಾಗಿ ಬೀಳುತ್ತಿದ್ದರೂ ಗಾಳಿಯಿಲ್ಲದ್ದರಿಂದ ಯಾವುದೇ ಮರಗಿಡಗಳು ಬಿದ್ದಿಲ್ಲ. ಬರೆ ಕುಸಿತವೂ ಉಂಟಾಗಿಲ್ಲ. ಶಾಲೆ ಕಾಲೇಜಿಗೆ ರಜೆ ಘೋಷಿಸಿದರಿಂದ ಪೊನ್ನಂಪೇಟೆ ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಜನ ಸಂದಣಿ ವಿರಳವಾಗಿತ್ತು.
ಆದರೂ ಬಾಳೆಲೆ, ಕಾರ್ಮಾಡು, ಕೊಟ್ಟಗೇರಿ, ವಡ್ಡರಮಾಡು, ಕಾನೂರು ಭಾಗಗಳಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಆಡುತ್ತಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಅವೆಲ್ಲ ಕತ್ತಲಲ್ಲಿ ಮುಳುಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.