ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿ ಮತ್ತು ತ್ಯಾಗತ್ತೂರಿನಲ್ಲಿ 2 ಕಾಡಾನೆಗಳ ಕಳೇಬರಗಳು ಶುಕ್ರವಾರ ಪತ್ತೆಯಾಗಿವೆ. ಎರಡೂ ಗಂಡಾನೆಗಳಾಗಿದ್ದು, ಮೃತದೇಹಗಳು ಕೊಳೆತು ಹೋಗಿವೆ.
‘ತಲಕಾವೇರಿಯಲ್ಲಿ ಅರಣ್ಯಕ್ಕೆ ಹೊಂದಿಕೊಂಡ ಹುಲ್ಲುಗಾವಲಿನಲ್ಲಿ 40 ವರ್ಷ ವಯಸ್ಸಿನ ಗಂಡಾನೆಯ ಮೃತದೇಹ ಪತ್ತೆಯಾಗಿದೆ. ಇದರ ಭಾರಿ ಗಾತ್ರದ ದಂತಗಳೂ ಸಿಕ್ಕಿವೆ. ಸುತ್ತಮುತ್ತಲ ಗಿಡಗಳೆಲ್ಲವೂ ಮುರಿದಿದ್ದು, ಮತ್ತೊಂದು ಆನೆಯೊಂದಿಗೆ ಕಾಳಗವಾಡುವಾಗ ಈ ಆನೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ’ ಎಂದು ಡಿಸಿಎಫ್ ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ತ್ಯಾಗತ್ತೂರು ಗ್ರಾಮದ ನಿವಾಸಿ ಎಂ.ಎಂ ಗಿರೀಶ್ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಶುಕ್ರವಾರ ಕಾರ್ಮಿಕರು ಕೆಲಸಕ್ಕೆ ತೆರಳುವ ವೇಳೆ ಕಾಡಾನೆ ಮೃತದೇಹ ಪತ್ತೆಯಾಗಿದೆ.
ಈ ಕಾಡಾನೆಯು ಅಂದಾಜು 18 ವರ್ಷ ವಯಸ್ಸಿನದ್ದಾಗಿದ್ದು, ಇದರ ದಂತಗಳೂ ಸಿಕ್ಕಿವೆ. ಕಾಲಿಗೆ ಗಾಯವಾಗಿದ್ದು, ಇಳಿಜಾರಿನ ಪ್ರದೇಶಕ್ಕೆ ಇಳಿಯುವಾಗ ಒಮ್ಮೆಗೆ ಬಿದ್ದು ಎದ್ದೇಳಲಾಗದೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಎ.ಸಿ.ಎಫ್ ಎ.ಎ.ಗೋಪಾಲ್, ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಅರಣ್ಯ ವೈದ್ಯಾಧಿಕಾರಿ ಚಿಟ್ಟಿಯಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.