ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ ಗುರುವಾರ ಕುಸಿದ ಅಂಬೂರ್ ಬಿರಿಯಾನಿ ಹೋಟೆಲ್ನ ಅವಶೇಷಗಳಿಂದ ಈವರೆಗೆ 9 ಮಂದಿಯನ್ನು ರಕ್ಷಿಸಲಾಗಿದೆ.
ಇವರಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತಿಬ್ಬರು ಸಿಲುಕಿರುವ ಶಂಕೆ ಇದ್ದು, ಅವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್) ಸ್ಥಳಕ್ಕೆ ಬಂದಿದ್ದು, ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದೆ.
ಹೋಟೆಲ್ ಮಾಲೀಕ ತಿರುಮುರುಗನ್, ಅವರ ಪತ್ನಿ ಅಲಮೇಲು, ಪುತ್ರ ನಾರಾಯಣ ಹಾಗೂ ಕಾರ್ಮಿಕ ಮಾಲಿಂಗ ಅವರನ್ನು ರಕ್ಷಿಸಲಾಗಿದೆ. ಹೋಟೆಲ್ನಲ್ಲಿ ಊಟಕ್ಕೆ ಬಂದಿದ್ದ ಗ್ರಾಹಕ ಮಧು ಎಂಬುವವರ ಕಾಲಿನ ಮೂಳೆ ಮುರಿದಿದ್ದು ಅವರನ್ನು ಗೋಣಿಕೊಪ್ಪಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗ್ರಾಹಕರ ತಲೆಗೆ ಪೆಟ್ಟಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಎಲ್ಲರೂ ಹೊರ ಬಂದಿದ್ದು, ಅವಶೇಷಗಳಡಿ ಮತ್ತ್ಯಾರು ಸಿಲುಕಿಲ್ಲ ಎಂದು ಮಾಲೀಕರು ಹೇಳುತ್ತಿದ್ದರೂ, ಸ್ಥಳೀಯರು ಇನ್ನಿಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಣಿಕೊಪ್ಪಲಿನ ಮೈಸೂರು ರಸ್ತೆಯನ್ನು ಬಂದ್ ಮಾಡಿ, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.