ಮಡಿಕೇರಿ: ನಗರದಲ್ಲಿ ಜಾನುವಾರುಗಳನ್ನು ಬೀದಿಯಲ್ಲಿ ಬಿಡುವುದಕ್ಕೆ ನಗರಸಭೆ ನಿಷೇಧ ಹೇರಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ನಗರಸಭೆಯ ಪೌರಾಯುಕ್ತ ವಿಜಯ್, ಬೀದಿಯಲ್ಲಿ ಅಲೆಯುವ ಜಾನುವಾರುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಬಿಡಾಡಿ ದನಗಳು ಬೇಕಾಬಿಟ್ಟಿ ಓಡಾಡುತ್ತಿದ್ದು, ಇದರಿಂದ ರಸ್ತೆ ಅಪಘಾತ ಸಂಭವಿಸುವ ಹಾಗೂ ಪಾದಚಾರಿಗಳು ವಾಹನ ಸವಾರರಿಗೆ ಮತ್ತು ಇತರ ಪ್ರಾಣಿಗಳಿಗೂ ಹಾನಿ ಆಗುವ ಸಂಭವವಿರುತ್ತದೆ.
ಲೋಕಾಯುಕ್ತ ಡಿವೈಎಸ್ಪಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಕ್ರಮವಹಿಸುವಂತೆ ಸೂಚಿಸಿದ್ದು, ಅದರಂತೆ ನಗರಸಭೆ ವ್ಯಾಪ್ತಿಯ ಎಲ್ಲಾ ಬಿಡಾಡಿ ದನಗಳ ಮಾಲೀಕರು ತಮ್ಮ ಸ್ವಾಧೀನದಲ್ಲಿರುವ ಯಾವುದೇ ಹಸು, ದನಗಳನ್ನು ತಮ್ಮ ವ್ಯವಸ್ಥೆಯಲ್ಲಿಟ್ಟುಕೊಳ್ಳದೇ ಸಾರ್ವಜನಿಕ ಮಾರ್ಗದಲ್ಲಿ, ದಾರಿಯಲ್ಲಿ ಬಿಟ್ಟು ಯಾವುದೇ ವ್ಯಕ್ತಿಗೆ ಅಪಾಯ ಮತ್ತು ಅಡ್ಡಿಪಡಿಸಿದ್ದಲ್ಲಿ ಅಂತಹ ವ್ಯಕ್ತಿಗೆ ಐಪಿಸಿ ಸೆಕ್ಷನ್ 283 ಪ್ರಕಾರ ಶಿಕ್ಷೆಗೆ ಒಳಪಡಿಸುವ ಮತ್ತು ವ್ಯಕ್ತಿಯ ಸ್ವಾಧೀನದಲ್ಲಿರುವ ಪ್ರಾಣಿಗಳಿಂದ ಮನುಷ್ಯನ ಪ್ರಾಣಕ್ಕೆ ಅಪಾಯವಾದರೆ ಅಂತಹ ವ್ಯಕ್ತಿ ವಿರುದ್ಧ ಐಪಿಸಿ ಸೆಕ್ಷನ್ 289 ಪ್ರಕಾರ ಪ್ರಕರಣ ದಾಖಲಿಸಲು ಅವಕಾಶವಿದೆ.
ಆದ್ದರಿಂದ ಜಾನುವಾರುಗಳನ್ನು ನಗರಸಭಾ ವ್ಯಾಪ್ತಿಯ ರಸ್ತೆಯಲ್ಲಿ ಬಿಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಈ ಪ್ರಕಟಣೆಯನ್ನು ಉಲ್ಲಂಘಿಸಿ ಬಿಡಾಡಿ ದನಗಳಿಂದ ಅಪಘಾತ, ಅವಗಢ ಸಂಭವಿಸಿ ಗಾಯಗೊಂಡರೆ ಅಥವಾ ಹಾನಿಯಾದರೆ ಜಾನುವಾರುಗಳ ಮಾಲೀಕರೆ ಜವಾಬ್ದಾರರು. ಹಾಗೂ ಅವರಿಗೆ ದಂಡವನ್ನು ಸಹ ವಿಧಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.