ಸೋಮವಾರಪೇಟೆ: ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ದೊಡ್ಡದಾಗಿದ್ದರೂ, ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ತಜ್ಞ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಡಿಎಚ್ಒ ಸತೀಶ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಇಂದೂಧರ್ ಅವರಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದರು.
‘ಶಸ್ತ್ರಚಿಕಿತ್ಸಕರು, ಮೂಳೆತಜ್ಞರು, ಅರಿವಳಿಕೆ ತಜ್ಞರು, ರೇಡಿಯಾಲಜಿಸ್ಟ್, ಗೈನಾಕಾಲಜಿಸ್ಟ್ ಕಾಯಂ ಆಗಿದ್ದರೆ ಎಲ್ಲಾ ಚಿಕಿತ್ಸೆಗಳನ್ನು ನೀಡಬಹುದು. ಈ ಹುದ್ದೆಗಳನ್ನು ಭರ್ತಿಗೆ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಡಯಾಲಿಸಿಸ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಬೆಡ್ಗಳ ಅವಶ್ಯಕತೆಯಿದ್ದರೆ ಇಲಾಖೆಯಿಂದ ಅನುದಾನ ಒದಗಿಸಲಾಗುವುದು. ಆಸ್ಪತ್ರೆ ದುರಸ್ತಿಗೆ ₹1.70 ಕೋಟಿ ಅನುದಾನ ನೀಡಲಿದ್ದು, ಆಪರೇಷನ್ ಥಿಯೇಟರ್ ಉನ್ನತೀಕರಣ ಕೈಗೊಳ್ಳಲಾಗುವುದು’ ಎಂದದು.
‘ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ₹1.25 ಲಕ್ಷ ಸಂಬಳ ನೀಡಲಾಗುತ್ತಿದೆ. ಆದರೂ ಗ್ರಾಮೀಣ ಆಸ್ಪತ್ರೆಗಳಿಗೆ ವೈದ್ಯರು ಬರುತ್ತಿಲ್ಲ. ಸರ್ಕಾರದೊಂದಿಗೆ ಚರ್ಚಿಸಿ ಸಂಬಳ ಹೆಚ್ಚು ಮಾಡುವ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ಆಸ್ಪತ್ರೆಯಲ್ಲಿ ಶುಚಿತ್ವ ಮತ್ತು ಭದ್ರತೆಗೆ ಆಸ್ಪತ್ರೆಯ ನಿಧಿಯನ್ನು ಬಳಸಿಕೊಂಡು, ಖಾಸಗಿ ಏಜೆನ್ಸಿ ಮೂಲಕ ಅಗತ್ಯ ಕೆಲಸದವರನ್ನು ನೇಮಿಕೊಳ್ಳಬಹುದು. ತಾಲ್ಲೂಕು ಕೇಂದ್ರವಾದರೂ ಮಾಸಿಕ ಕೇವಲ 20 ಹೆರಿಗೆ ಮಾಡಿಸುತ್ತಿರುವುದು ಸಾಲುವುದಿಲ್ಲ. ಸರಿಯಾದ ಚಿಕಿತ್ಸೆಯೊಂದಿಗೆ ಅಗತ್ಯ ಸೇವೆ ನೀಡಿದಲ್ಲಿ ಹೆಚ್ಚಿನ ಜನರು ಪ್ರಯೋಜನ ಪಡೆದುಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.
‘ಆಸ್ಪತ್ರೆಗೆ ಅರಿವಳಿಕೆ ತಜ್ಞರು ಆಗಮಿಸಿದ ತಕ್ಷಣ ಸಾಧ್ಯವಾಗುವ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿಯೇ ನಿರ್ವಹಿಸಬೇಕು. ಬೇರೆ ಆಸ್ಪತ್ರೆಗೆ ಕಳುಹಿಸುವ ಅಗತ್ಯ ಇಲ್ಲ’ ಎಂದು ಆಡಳಿತ ವೈದ್ಯಾಧಿಕಾರಿ ಮಂಜುಳಾ ಅವರಿಗೆ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.