ಮಡಿಕೇರಿ: ಕೊಡಗು ಜಿಲ್ಲೆಯ ಅತಿ ಎತ್ತರದ ಬೆಟ್ಟ ಶ್ರೇಣಿಗಳಲ್ಲಿ 3ನೇ ಸ್ಥಾನದಲ್ಲಿರುವ ಕೋಟೆ ಬೆಟ್ಟವನ್ನು ಮಕ್ಕಳೂ, ಪೋಷಕರೂ ಸೇರಿದಂತೆ ಒಟ್ಟು 130 ಮಂದಿ ಮಕ್ಕಳು ಹತ್ತಿ ಸಂಭ್ರಮಿಸಿದರು.
ಮಡಿಕೇರಿಯ ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಉಚಿತ ಬೇಸಿಗೆ ಶಿಬಿರದ ಅಂಗವಾಗಿ ಕೋಟೆ ಬೆಟ್ಟಕ್ಕೆ ಚಾರಣ ಏರ್ಪಡಿಸಲಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಬೆಟ್ಟ ಈಶ್ವರ ದೇವಾಲಯವನ್ನೊಳಗೊಂಡಿರುವ ಪವಿತ್ರ ಕ್ಷೇತ್ರದೊಂದಿಗೆ ಚಾರಣಕ್ಕೂ ಹಸರುವಾಸಿ. ಈ ಬೆಟ್ಟವನ್ನೇರಿದ ಪುಟಾಣಿ ಮಕ್ಕಳು ಪ್ರಕೃತಿಯ ಸೊಬಗನ್ನುಂಡು ಸಂಭ್ರಮಿಸಿದರು.
ಪುಟಾಣಿಗಳಿಂದ ಹಿಡಿದು ಮಕ್ಕಳು, ಪೋಷಕರು ಸೇರಿದಂತೆ 130ಕ್ಕೂ ಅಧಿಕ ಮಂದಿ ಈ ಚಾರಣದಲ್ಲಿ ಪಾಲ್ಗೊಂಡಿದದ್ದರು. ಬಿರು ಬಿಸಿಲನ್ನೂ ಲೆಕ್ಕಿಸದೆ ಮಕ್ಕಳು ಬೆಟ್ಟವನ್ನೇರಿ ಸಂಭ್ರಮಿಸಿದರು. ಕಾಡಿನಲ್ಲಿ ದೊರಕುವ ಗೊಟ್ಟೆ ಹಣ್ಣು, ಈಚಲು ಹಣ್ಣು, ಜರ್ಗುಳಿ, ಚೂರಿ ಹಣ್ಣು ಮುಂತಾದ ಹಣ್ಣುಗಳ ಸವಿಯುಚರುಂಡರಲ್ಲದೆ ವಿವಿಧ ಗಿಡ, ಮರಗಳ ಪರಿಚಯ ಮಾಡಿಕೊಂಡರು. ಶಿಬಿರದ ಮೇಲುಸ್ತುವಾರಿ ವಹಿಸಿಕೊಂಡಿದ್ದ ತರಬೇತುದಾರರು ಮಕ್ಕಳಿಗೆ ಮಾಹಿತಿ ನೀಡಿದರು.
ಭಾಗವಹಿಸಿದ್ದ ಎಲ್ಲರಿಗೂ ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಎಸ್.ಟಿ.ವೆಂಕಟೇಶ್, ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಹರೇಂದ್ರ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಚಾರಣದಲ್ಲಿ ಪಾಲ್ಗೊಂಡಿದ್ದರು. ಆರೋಹಣ ತಂಡದ ಕೆ.ಕೆ. ಮಹೇಶ್ ಕುಮಾರ್ ಕ್ಷೇತ್ರದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರಲ್ಲದೆ, ತಂಡದವರೊಂದಿಗೆ ಸ್ಥಳದಲ್ಲಿ ಭಜನೆ ಕಾರ್ಯ ನಡೆಸಿಕೊಟ್ಟರು.
ಸಮಾರೋಪ ಇಂದು
ಏಪ್ರಿಲ್ 1ರಿಂದ ಶುರುವಾಗಿರುವ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮೇ 1ರಂದು ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ರಾಷ್ಟ್ರೀಯ ಹಾಕಿ ತೀರ್ಪುಗಾರ ಚೆಪ್ಪುಡಿರ ಅಯ್ಯಪ್ಪ ಕಾರ್ಯಪ್ಪ, ರಾಷ್ಟ್ರೀಯ ಹಾಕಿ ಆಟಗಾರ ಬಿ.ಎಸ್.ಚೆಂಗಪ್ಪ ಭಾಗವಹಿಸುವರು. ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ಅದ್ಯಕ್ಷ ಕೋಟೇರ ಮುದ್ದಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಕಲಿತ ಪ್ರದರ್ಶನ ಹಾಗೂ ಶಿಬಿರಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಹಾಕಿ, ಅಥ್ಲೆಟಿಕ್, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಸಂಚಾಲಕ ಬಾಬು ಸೋಮಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.