ಸುಂಟಿಕೊಪ್ಪ: ಸಮೀಪದ ಹೆರೂರು ವ್ಯಾಪ್ತಿಯ ಹಾರಂಗಿ ಹಿನ್ನೀರಿನಲ್ಲಿ ಭಾನುವಾರ ಸಂಜೆ ಮುಳುಗಿದ್ದ ಮೈಸೂರು ಮೂಲದ ಪ್ರವಾಸಿಗ ಶಶಿ ಎಂಬುವರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೈಸೂರಿನಿಂದ 10 ಜನರ ತಂಡ ಶನಿವಾರ ಕೊಡಗು ಪ್ರವಾಸಕ್ಕೆ ಆಗಮಿಸಿದ್ದರು. ಭಾನುವಾರ ಸಂಜೆ ಮೈಸೂರಿಗೆ ವಾಪಾಸಾಗುವ ಮುನ್ನ ಸುಂಟಿಕೊಪ್ಪ ಸಮೀಪದ ಹೆರೂರು ಹಾರಂಗಿ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಈಜಲು ತೆರಳಿದ ಮೈಸೂರಿನ ಮೇಟಗಳ್ಳಿ ನಿವಾಸಿ ಶಶಿ ಮುಳುಗಿ ಸಾವನ್ನಪ್ಪಿದ್ದರು. ಭಾನುವಾರ ರಾತ್ರಿಯವರೆಗೂ ಸುಂಟಿಕೊಪ್ಪ ಪೊಲೀಸರ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತಜ್ಞರು ಹುಡುಕಾಟ ನಡೆಸಿದರು. ರಾತ್ರಿಯಾದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.
ಅದರಂತೆ ಸೋಮವಾರ ಬೆಳಿಗ್ಗೆ 6ರಿಂದ ಕಾರ್ಯಾಚರಣೆಗೆ ಇಳಿದ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ಸಿಪಿಐ ರಾಜೇಶ್ ಕೋಟ್ಯಾನ್, ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳದ ಪಿಎಸ್ ಐ ಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿ ಸತೀಸ್, ಜಗದೀಶ್, ನಿಶಾಂತ್, ಸತೀಶ್ ಇಳೆಗೆರೆ ಅವರು ಬೆಳಿಗ್ಗೆ 8 ಸಮಯದಲ್ಲಿ ಮೃತದೇಹ ಹೊರತೆಗೆದು ವಾರಸುದಾರರಿಗೆ ಒಪ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.