ADVERTISEMENT

ತ್ರಿವೇಣಿ ಸಂಗಮದಲ್ಲಿ ಜಲಕ್ರೀಡೆಗೆ ಅವಕಾಶ ಬೇಡ: ಸಕ ಎ.ಎಸ್.ಪೊನ್ನಣ್ಣ

ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 6:23 IST
Last Updated 19 ಜೂನ್ 2024, 6:23 IST
ಶಾಸಕ ಎ.ಎಸ್.ಪೊನ್ನಣ್ಣ ಅವರು ಭಾಗಮಂಡಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಶಾಸಕ ಎ.ಎಸ್.ಪೊನ್ನಣ್ಣ ಅವರು ಭಾಗಮಂಡಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಮಡಿಕೇರಿ: ದಕ್ಷಿಣ ಭಾರತದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕಾವೇರಿಯ ತ್ರಿವೇಣಿ ಸಂಗಮದಲ್ಲಿ ಜಲಕ್ರೀಡೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಪೊಲೀಸರು ಮತ್ತು ಭಗಂಡೇಶ್ವರ ದೇವಾಲಯ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು.

ಭಾಗಮಂಡಲ ಮೇಲ್ಸೇತುವೆ ವೀಕ್ಷಣೆಯ ವೇಳೆ ತ್ರಿವೇಣಿ ಸಂಗಮದಲ್ಲಿ ಈಜಾಡುತ್ತಿದ್ದ ಪ್ರವಾಸಿಗರನ್ನು ಕಂಡು ಸಿಡಿಮಿಡಿಗೊಂಡ ಅವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ತ್ರಿವೇಣಿ ಸಂಗಮದಲ್ಲಿ ಜಲಕ್ರಿಡೆ ನಡೆಸುತ್ತಿದ್ದ ಪ್ರವಾಸಿಗರಿಗೆ ಕ್ಷೇತ್ರದ ಪಾವಿತ್ರ್ಯತೆ ಬಗ್ಗೆ ತಿಳಿಸಿ ಮನವರಿಕೆ ಮಾಡಿದರು.

ADVERTISEMENT

ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ವಾತಾವರಣ ನಿರ್ಮಾಣವಾಗಬಾರದು ಎಂದರು.

ಸಿಬ್ಬಂದಿ ಕಾವಲು ಕಾಯುವಂತೆ ನಿರ್ದೇಶನ ನೀಡಿದ ಪೊನ್ನಣ್ಣ ಅವರು, ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದ್ದರೆ ಒದಗಿಸುವುದಾಗಿ ತಿಳಿಸಿದರು.

ಪ್ರವಾಸಿಗರಿಗೆ ಈ ನಿಟ್ಟಿನಲ್ಲಿ ಮಾಹಿತಿ ನೀಡಲು ತಿಳಿವಳಿಕೆ ಫಲಕ ಅಳವಡಿಸುವಂತೆ ಸಬ್ ಇನ್‌ಸ್ಪೆಕ್ಟರ್‌ ಅವರಿಗೆ ಸೂಚನೆ ನೀಡಿದರು.

ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಭಾಗಮಂಡಲ ಮತ್ತು ತಲಕಾವೇರಿ ಪೌರಾಣಿಕ ಹಿನ್ನೆಲೆಯುಳ್ಳ ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ವಿರುದ್ದವಾಗಿ ಯಾವುದೇ ನಡವಳಿಕೆ ಸಹಿಸಲು ಸಾಧ್ಯವಿಲ್ಲ’ ಎಂದರು.

ಮಾಹಿತಿ ಕೊರತೆಯಿಂದ ಕೆಲ ಪ್ರವಾಸಿಗರಿಂದ ಅಪಚಾರವಾಗುತ್ತಿರುವ ಸಂಗತಿ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಮುಖಂಡರಾದ ತೆನ್ನಿರಮೈನಾ, ರಮಾನಾಥ್, ಸೂರಜ್ ಹೊಸೂರು, ಸುನಿಲ್ ಪತ್ರಾವೋ, ನೆರವಂಡ ಉಮೇಶ್, ದೇವಂಗೋಡಿ ಹರ್ಷ, ಕುದುಪಜೆ ಪ್ರಕಾಶ್ ಭಾಗವಹಿಸಿದ್ದರು.

ಜಲಕ್ರೀಡೆ ನಡೆಸುತ್ತಿದ್ದವರಿಗೆ ಪಾಠ ಹೇಳಿದ ಶಾಸಕ ಧಾರ್ಮಿಕ ವಿಧಿವಿಧಾನಗಳಿಗೆ ವಿರುದ್ದವಾಗಿ ನಡೆಯದಂತೆ ಸೂಚನೆ ಮುಂದೆ ಇನ್ನಷ್ಟು ನಿಗಾ ವಹಿಸಲು ಸಿಬ್ಬಂದಿಗೆ ನಿರ್ದೇಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.