ಸುಂಟಿಕೊಪ್ಪ: ಇಲ್ಲಿನ ಮಾದಾಪುರದಲ್ಲಿ ಶನಿವಾರ ಸಂತೆ ದಿನ ವರ್ತಕರು ರಸ್ತೆ ಬದಿ ವ್ಯಾಪಾರ ಮಾಡದೆ, ಮಾರುಕಟ್ಟೆ ಆವರಣದಲ್ಲಿ ವ್ಯಾಪಾರ ಮಾಡುವಂತೆ ಗ್ರಾಮಪಂಚಾಯಿತಿ ಪಿಡಿಒ ಸೂಚಿಸಿದರು.
ಶನಿವಾರ ಮಾದಾಪುರ ಗ್ರಾಮ ಪಂಚಾಯಿತಿ ಪಿಡಿಒ ಬಾಲಕೃಷ್ಣ ರೈ, ಕಾರ್ಯದರ್ಶಿ ಅನಿತಾ, ಉಪಾಧ್ಯಕ್ಷ ಸುರೇಶ್ಭಾವೆ, ಸದಸ್ಯರಾದ ಪಿ.ಡಿ.ಅಂತೋಣಿ, ಕೆ.ಎ.ಲತೀಫ್ ಸಂತೆ ದಿನ ಭೇಟಿ ನೀಡಿ ಈ ವಿಷಯ ತಿಳಿಸಿದರು.
‘ಸಂತೆ ದಿನ ಬೇರೆಡೆಯಿಂದ ಬಂದ ವರ್ತಕರು ಮಾರುಕಟ್ಟೆ ಹೊರಗೆ ರಸ್ತೆ ಬದಿ ಅಂಗಡಿ ಇಟ್ಟು ವ್ಯಾಪಾರ ನಡೆಸುವುದರಿಂದ ಜನ ಸಾಮಾನ್ಯರಿಗೆ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ’ ಎಂದು ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರು.
ಸಂತೆ ದಿನ ದೂರದ ಸೂರ್ಲಬ್ಬಿ, ಗರ್ವಾಲೆ, ಹಟ್ಟಿಹೊಳೆ, ಹಾಲೇರಿ ಹಾಗೂ ಜಂಬೂರು ಗ್ರಾಮದಿಂದ ನಿತ್ಯೋಪಯೋಗಿ ಸಾಮಾಗ್ರಿ ಖರೀದಿಸಲು ಜನರು ಆಗಮಿಸುತ್ತಾರೆ. ಮಾದಾಪುರ ಮಾರುಕಟ್ಟೆ ವಿಶಾಲವಾಗಿದ್ದು, ಅಂಗಡಿ ಇಡಲು ಸ್ಥಳಾವಕಾಶವಿದ್ದರೂ ವರ್ತಕರು ರಸ್ತೆ ಬದಿ ಅಂಗಡಿ ತೆರೆಯುವುದರಿಂದ ಜನರಿಗೆ ಕಿರಿ ಕಿರಿಯಾಗುವುದನ್ನು ಸದಸ್ಯ ಲತೀಫ್ ವರ್ತಕರ ಗಮನಕ್ಕೆ ತಂದರು.
ಸುಂಕ ಎತ್ತುವಳಿ ಗುತ್ತಿಗೆ ಪಡೆದವರು ರಶೀದಿ ಕೊಡುತ್ತಿಲ್ಲವೆಂದು ತರಕಾರಿ ವ್ಯಾಪಾರಿ ಹೇಳಿದರು. ರಶೀದಿ ಕೊಡುವಂತೆ ಪಿಡಿಒ ಹಾಗೂ ಪೊಲೀಸ್ ಪೇದೆ ಅಬ್ದುಲ್ ರೆಹಮಾನ್ ಸುಂಕ ಎತ್ತುವಳಿಗಾರರಿಗೆ ಸೂಚಿಸಿದರು.
ಮಾರುಕಟ್ಟೆ ರಸ್ತೆಯಲ್ಲಿ ಅಂಗಡಿ ವಾಣಿಜ್ಯ ಮಳಿಗೆ ನಿರ್ಮಿಸಿದವರು ರಸ್ತೆ ಜಾಗ ಒತ್ತುವರಿ ಮಾಡಿಕೊಂಡಿದ್ದನ್ನು ಗಮನಿಸಿದ ಪಂಚಾಯಿತಿ ಆಡಳಿತ ಮಂಡಳಿ ಅವರಿಗೆ ನೋಟಿಸ್ ಜಾರಿ ಮಾಡಿದರು. ಇದರಿಂದ ರಸ್ತೆ ಜಾಗ ತೆರವುಗೊಳಿಸುವುದಾಗಿ ಅಂಗಡಿ ಮಾಲಿಕರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.