ಸುಂಟಿಕೊಪ್ಪ: ಸಮೀಪದ ಏಳನೇ ಹೊಸಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮದಲ್ಲಿ ಮತ್ತೆ ಶುಕ್ರವಾರವೂ ಕಾಡಾನೆಗಳು ಪಥ ಸಂಚಲನ ಮುಂದುವರೆಸಿದವು.
ಸಮೀಪದ ಅಂದಗೋವೆ ಪೈಸಾರಿ ರಸ್ತೆಯಲ್ಲಿ ಯಾವುದೇ ಭಯವಿಲ್ಲದೇ ಮಧ್ಯೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡ ರಸ್ತೆ ಬದಿಯಲ್ಲಿದ್ದ ಜನ ಭಯಭೀತರಾಗಿ ಮನೆಯತ್ತ ಓಡಿದರು.
ಇದೇ ವೇಳೆ ಕಾಡಾನೆ ಘೀಳಿಡುತ್ತಾ ರಾಷ್ಟ್ರೀಯ ಹೆದ್ದಾರಿಯತ್ತ ಬಂದು ಮೆಟ್ನಳ್ಳ ಮಾರ್ಗವಾಗಿ ಆನೆಕಾಡು ಅರಣ್ಯದೊಳಗೆ ನುಗ್ಗಿ ಕಣ್ಮರೆಗೊಂಡಿತು.
ಅದೇ ರೀತಿ ತೊಂಡೂರು ಗ್ರಾಮದ ಮನೆ ಮುಂಭಾಗದಲ್ಲಿಯೇ ಕಾಡಾನೆ ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.
ಈ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಆಗಾಗ್ಗೆ ಜನಸಾಮಾನ್ಯರ ಮತ್ತು ಮನೆಗಳ ಅಕ್ಕಪಕ್ಕದಲ್ಲಿ ಸಂಚರಿಸುತ್ತಿರುವುದರಿಂದ ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ಯಾವ ಸಮಯದಲ್ಲಿ ತಿರುಗಿ ಬೀಳುತ್ತವೆಯೋ ಎಂಬ ಭೀತಿಯಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಓಡಾಡುವಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಪಾಯ ಎದುರಾಗುವ ಮುನ್ನ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.