ಮಡಿಕೇರಿ: ಹಲವು ಜನಪದಗೀತೆಗಳು ಅನುರಣಿಸಿದವು, ಜನಪದನೃತ್ಯಗಳು ಮನರಂಜಿಸಿದವು, ನಗರದ ಗಾಂಧಿ ಮೈದಾನದಲ್ಲಿ ಗುರುವಾರ ಜನಪದ ಲೋಕವೇ ಸೃಷ್ಟಿಯಾಗಿತ್ತು.
ಸುಪ್ರೀತಾ ಮತ್ತು ಅವರ ತಂಡ ಪ್ರಸ್ತುತಪಡಿಸಿದ ಬನ್ನಿ ಮುಡಿಯೋಣು ಬಾರಾ ಹಾಡು, ಇಂದುಮತಿ ಅವರ ಕಂಠದಿಂದ ಹೊರಹೊಮ್ಮಿದ ರಾಗಿ ಬೀಸುವ ಪದಗಳು, ಅಲ್ ಅಮೀನ್ ದಫ್ ಸಂಘದಿವರು ಪ್ರಸ್ತುತಪಡಿಸಿದ ದಫ್ ಹೀಗೆ ಒಂದೇ ಎರಡೇ ವೈವಿಧ್ಯಮಯ ಜನಪದ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.
ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ, ‘ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ‘ಜಾನಪದ ಪರಿಷತ್ಗೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಭೂಮಿ ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ‘ಜಾನಪದ ಕಲೆಗಳು ಪ್ರತಿಯೊಬ್ಬರನ್ನೂ ಒಟ್ಟುಗೂಡಿಸುತ್ತವೆ. ಇದರಿಂದ ಪ್ರತಿಯೊಬ್ಬರಲ್ಲಿಯೂ ಸಹಬಾಳ್ವೆ ಹೆಚ್ಚಾಗುತ್ತವೆ. ಜಾನಪದ ಮತ್ತು ಸಂಗೀತಕ್ಕೆ ಯಾವುದೇ ರೀತಿಯ ಜಾತಿ, ಧರ್ಮ ಭೇದವಿಲ್ಲ’ ಎಂದು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ‘ಜಾನಪದ ಕಲೆಗಳು ಉಳಿದಾಗ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಜಾನಪದ ಕಲೆಗಳನ್ನು ಮಕ್ಕಳಿಗೆ ತಿಳಿಸಬೇಕು ಮತ್ತು ಕಲಿಸಬೇಕು’ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಜಿಲ್ಲಾಡಳಿತದ ವತಿಯಿಂದ ಜಾನಪದ ಪರಿಷತ್ಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುವುದು. ಜಾನಪದ ಪರಿಷತ್ಗೆ ಜಾಗ ಕಲ್ಪಿಸುವ ಸಂಬಂಧ ಕ್ರಮವಹಿಸಲಾಗುವುದು’ ಎಂದು ಹೇಳಿದರು.
ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ‘ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹೀಗೆ ವಿವಿಧ ಅಕಾಡೆಮಿಗಳು ಹಾಗೂ ಸಂಘಟನೆಗಳ ಸಹಕಾರದಲ್ಲಿ ಜಾನಪದ ದಸರಾವನ್ನು ಆಚರಿಸಲಾಗುತ್ತಿದೆ’ ಎಂದು ಹೇಳಿದರು.
ಸಾಹಿತಿ ಫ್ಯಾನ್ಸಿ ಮುತ್ತಣ್ಣ ಹಾಗೂ ಕಿಗ್ಗಾಲು ಗಿರೀಶ್ ಅವರು ಹೊರ ತಂದಿರುವ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ ಅವರನ್ನು ಸನ್ಮಾನಿಸಲಾಯಿತು.
ಹಲವು ದಶಕಗಳ ಹಳೇ ಪರಿಕರಗಳ ಪ್ರದರ್ಶನಕ್ಕೆ ಅವಕಾಶ ಮಾಡಿದ ಪೊನ್ನಚ್ಚನ ಮಧುಸೂದನ್, ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಜಾನಪದ ಪರಿಷತ್ತಿನ ಪ್ರಕಾಶ್, ದಿಲನ್, ಥಾಮಸ್, ಪ್ರಶಾಂತ್, ಸುಶಾನದೇವಿ ಭಾಗವಹಿಸಿದ್ದರು.
ಜಾನಪದ ದಸರಾದ ಮೆರವಣಿಗೆಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.