ಸೋಮವಾರಪೇಟೆ: ‘ಗಣಿಗಾರಿಕೆ ಸಂಬಂಧ ಟಿಪ್ಪರ್ಗಳಲ್ಲಿ ಭಾರಿಗಾತ್ರದ ಜಲ್ಲಿಕಲ್ಲು ತುಂಬಿಸಿ ಸಾಗಿಸುತ್ತಿರುವುದರಿಂದ ಆಡಿನಾಡೂರು ಗ್ರಾಮದ ರಸ್ತೆ ದುಸ್ಥಿತಿಗೆ ತಲುಪುತ್ತಿದ್ದು, ಮುಂದಿನ ಒಂದು ವಾರ ನಿರಂತರ ವಾಹನಗಳು ಸಂಚರಿಸಿದಲ್ಲಿ ಗುಂಡಿ ಹೆಚ್ಚಾಗಲಿವೆ. ಕೂಡಲೆ ಸರಿಪಡಿಸಬೇಕು’ ಎಂದು ಗ್ರಾಮದ ಎಸ್.ಈ. ಅಣ್ಣಯ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
‘ರಸ್ತೆಯಲ್ಲಿ ಮಿತಿ ಮೀರಿದ ಭಾರಿ ಕಲ್ಲು ಗಣಿಗಾರಿಕೆ ಲಾರಿಗಳು ಸಂಚರಿಸುತ್ತಿವೆ. ಇದರಿಂದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ನಿರಂತರ ತೊಂದರೆಯಾಗುತ್ತಿದೆ. ಈ ರಸ್ತೆ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ರಸ್ತೆ ಹೆಬ್ಬಾಲೆಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಹೆಚ್ಚಿನ ಸ್ಥಳಗಳಲ್ಲಿ ರಸ್ತೆ ಡಾಂಬರು ಕಿತ್ತು ಬರುತ್ತಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಸಗೋಡು ಗ್ರಾಮದಿಂದ ಕಣಿವೆಗೆ ಸಂಪರ್ಕಿಸುವ ಮಾರ್ಗದ ಕಾಮಗಾರಿ ನಡೆಸುತ್ತಿರುವುದರಿಂದ ಆ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ, ಇಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಈ ಹಿಂದಿನಿಂದಲೂ ಗಣಿಗಾರಿಕೆ ಲಾರಿಗಳು ಸಂಚರಿಸುತ್ತಿವೆ. ಸೋಮವಾರಪೇಟೆ ಮತ್ತು ಮಡಿಕೇರಿ ಲೋಕೋಪಯೋಗಿ ಇಲಾಖೆಗೆ ರಸ್ತೆ ಸರಿಪಡಿಸಲು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಗ್ರಾಮ ಪಂಚಾಯಿತಿ ಜನಸಂಪರ್ಕ ಸಭೆ ಇರುವುದರಿಂದ ಭಾರಿ ಗುಂಡಿಗಳನ್ನು ಗಣಿಗಾರಿಕೆಯವರೇ ಜಲ್ಲಿಪುಡಿ ತಂದು ಮುಚ್ಚುತ್ತಿದ್ದಾರೆ. 10 ಚಕ್ರಗಳ ಟಿಪ್ಪರ್ ಇಲ್ಲಿನ ಸಂಚಾರಕ್ಕೆ ನಿಷೇಧವಿದ್ದರೂ, ಎಗ್ಗಿಲ್ಲದೆ ಸಾಗುತ್ತಿವೆ. ರಸ್ತೆ ಮಾಡಿದ ಗುತ್ತಿಗೆದಾರರಿಗೆ 5 ವರ್ಷಗಳ ನಿರ್ವಹಣೆ ಮಾಡಬೇಕಿದ್ದರೂ, ನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಇಲ್ಲಿನ ಶಾಲೆಯ ಬಳಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆಗೆ ಉಬ್ಬು ನಿರ್ಮಿಸಿರುವುದರಿಂದ ವಾಹನಗಳ ಹಾಗೂ ಜನರ ಸಂಚಾರಕ್ಕೆ ತೊಡಕಾಗಿದೆ. ತಾವುಗಳು ಇದರತ್ತ ಗಮನ ಹರಿಸಿ ಪ್ರಸಕ್ತ ಸಾಲಿನ ಕ್ರಿಯಾಯೋಜನೆ ಅಡಿಯಲ್ಲಿ ಈ ರಸ್ತೆಯನ್ನು ಸರಿಪಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.