ವಿರಾಜಪೇಟೆ: ಸರ್ಕಾರ ಜಾರಿಗೆ ತಂದಿರುವ ಭೂ-ಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿಯನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಭೂ-ಗುತ್ತಿಗೆ ವಿರೋಧಿ ಐಕ್ಯ ಹೋರಾಟ ಸಮಿತಿಯ ಜಿಲ್ಲಾ ಘಟಕದ ಸದಸ್ಯರು, ಪ್ರಮುಖರು ಪಟ್ಟಣದ ಮಿನಿವಿಧಾನ ಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾ ಘಟಕದ ಸಂಚಾಲಕ ಹಾಗೂ ವಿರಾಜಪೇಟೆ ಪುರಸಭೆಯ ಸದಸ್ಯ ವಿ.ಆರ್.ರಜನಿಕಾಂತ್, ‘ಜಿಲ್ಲೆಯಲ್ಲಿ ಕಾರ್ಪೋರೇಟ್ಗಳು, ಅತೀ ದೊಡ್ಡ ಭೂಮಾಲೀಕರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸಿ, ಬಡವರಿಗೆ ಹಂಚಬೇಕು. ನಿವೇಶನ ಇಲ್ಲದವರಿಗೆ ನಿವೇಶನ ಹಾಗೂ ಕೃಷಿ ಭೂಮಿ ನೀಡಬೇಕು. ಈಗಾಗಲೇ ಜಾರಿಯಲ್ಲಿರುವ ಭೂ ಹಂಚಿಕೆ ನಿಯಮದಂತೆ ಹಾಗೂ ಸರ್ಕಾರ ನೇಮಿಸಿರುವ ಅಕ್ರಮ ಸಕ್ರಮ ಸಮಿತಿಯಯಲ್ಲಿ ಬಾಕಿಯಿರುವ ಕಡತಗಳನ್ನು ಕೂಡಲೇ ವಿಲೇವಾರಿ ಮಾಡಬೇಕು’ ಎಂದು ಒತ್ತಾಯಿಸಿದರು.
ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ರಮೇಶ್ ಎಚ್.ಬಿ. ಮಾತನಾಡಿ, ‘ಜಿಲ್ಲೆಯ ಭೂರಹಿತ ಆದಿವಾಸಿ, ದಲಿತ ಸಮುದಾಯ, ಭೂರಹಿತ ಹಿಂದುಳಿದ ವರ್ಗ, ಮೇಲ್ವರ್ಗದ ಜಾತಿಗೆ ಸೇರಿರುವ ಭೂರಹಿತರಿಗೆ ಭೂಮಿಯನ್ನು ನೀಡಬೇಕು. ಎರಡು-ಮೂರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಜಿಲ್ಲೆಯ ಮೇಲ್ಜಾತಿಯ ಸಣ್ಣ ಬೆಳೆಗಾರರಿಗೂ ಕೂಡ ತಲಾ 5 ಎಕರೆ ಸರ್ಕಾರಿ ಭೂಮಿಯನ್ನು ಹಂಚಬೇಕು. ನದಿ ತೀರ ಹಾಗೂ ಅರಣ್ಯದಂಚು ಸೇರಿದಂತೆ ಪೈಸಾರಿಯಲ್ಲಿ ವಾಸ ಮಾಡುವ ಬಡವರಿಗೆ ಸರ್ಕಾರ ಕೂಡಲೇ ಬದಲಿ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನಕಾರರು ತಹಶೀಲ್ದಾರ್ ಎಚ್.ಎನ್.ರಾಮಚಂದ್ರ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಘಟಕದ ಸಂಚಾಲಕ ಸತೀಶ್ ಎಚ್.ಬಿ, ದಸಂಸನ ತಾಲ್ಲೂಕು ಸಂಚಾಲಕ ನಾಗೇಶ್ ಎಚ್.ಬಿ, ದಸಂಸ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕ ಲವ, ದಸಂಸ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ, ದಲಿತ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕ ಶಿವಪ್ಪ ಎಚ್.ಆರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.