ಗೋಣಿಕೊಪ್ಪಲು: ಪಟ್ಟಣವೂ ಸೇರಿದಂತೆ ಪೊನ್ನಂಪೇಟೆ, ಹುದಿಕೇರಿ, ಬಿ.ಶೆಟ್ಟಿಗೇರಿ, ಕುಂದ, ಅತ್ತೂರು, ಅರುವತ್ತೊಕ್ಕಲು ಮೊದಲಾದ ಭಾಗಗಳಿಗೆ ಗುರುವಾರ ಬೆಳಿಗ್ಗೆಯಿಂದ ಆಗಾಗ್ಗೆ ರಭಸದ ಮಳೆ ಸುರಿಯಿತು.
ಸೂರ್ಯನ ಮುಖವನ್ನೇ ಕಾಣದ ವಾತಾವರಣದಲ್ಲಿ ರಭಸವಾಗಿ ಬಿದ್ದ ಮಳೆಗೆ ತೊರೆ ತೋಡು, ರಸ್ತೆ ಬದಿಯ ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು. ಗೋಣಿಕೊಪ್ಪಲು ಕೀರೆಹೊಳೆಯಲ್ಲಿಯೂ ಹೊಸ ನೀರು ಹರಿಯಿತು.
ಈ ಹೊಳೆಗೆ ಸೇರುವ ತೋಡುಗಳಲ್ಲಿಯೂ ನೀರು ತುಂಬಿ ಹರಿಯಿತು. ಬಿರುನಾಣಿ, ಬೀರುಗ, ಹೈಸೊಡ್ಲೂರು ಭಾಗದಲ್ಲಿಯೂ ಉತ್ತಮ ಮಳೆ ಸುರಿಯಿತು. ಈ ಭಾಗದ ತೊರೆ ತೋಡುಗಳಲ್ಲಿ ಹಸಿರು ಗಿಡಮರಗಳ ನಡುವೆ ವೈಯ್ಯಾರದಿಂದ ಹರಿಯುವ ನೀರಿನ ಸೊಬಗು ಮನ ಸೆಳೆಯುತ್ತಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಭತ್ತದ ಗದ್ದೆಗಳತ್ತ ಮುಖ ಮಾಡಿದ್ದಾರೆ. ಭತ್ತ ಬೀಜ ಬಿತ್ತನೆ ಮಾಡುವ ಗದ್ದೆಗಳನ್ನು ಹದ ಮಾಡುವ ಕಾರ್ಯದತ್ತ ಗಮನ ಹರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.