ಮಡಿಕೇರಿ: ಕೊಡಗು ಜಿಲ್ಲೆಯ ಭಾಗಮಂಡದಲ್ಲಿ ಮಳೆಯ ಬಿರುಸು ಮುಂದುವರೆದಿದ್ದು, ಉಳಿದೆಡೆ ಸಾಧಾರಣ ಮಳೆಯಾಗುತ್ತಿದೆ.
ಮಡಿಕೇರಿಯಲ್ಲಿ ದಿನವಿಡೀ ಜಿಟಿಜಿಟಿ ಮಳೆಯಾಯಿತು. ವಿರಾಜಪೇಟೆಯಲ್ಲಿ ಸಾಧಾರಣ ಮಳೆಯಾಗಿದೆ.
ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಭಾಗಮಂಡಲದಲ್ಲಿ 3 ಹಾಗೂ ಶಾಂತಳ್ಳಿಯಲ್ಲಿ 2 ಸೆಂ.ಮೀನಷ್ಟು ಮಳೆಯಾಗಿದೆ.
ಮಳೆಯ ಪ್ರಮಾಣ ತಗ್ಗಿರುವುದರಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 3,290 ಕ್ಯುಸೆಕ್ನಿಂದ 2,121 ಕ್ಯುಸೆಕ್ಗೆ ಇಳಿಕೆಯಾಗಿದೆ. ನದಿಗೆ ಬಿಡುತ್ತಿರುವ ನೀರಿನ ಪ್ರಮಾಣವನ್ನು 1 ಸಾವಿರ ಕ್ಯುಸೆಕ್ನಿಂದ 700 ಕ್ಯುಸೆಕ್ಗೆ ಇಳಿಕೆ ಮಾಡಲಾಗಿದೆ.
ಕಡಿಮೆಯಾದ ಮಳೆಯ ಅಬ್ಬರ
(ಉಡುಪಿ ವರದಿ): ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಅಬ್ಬರಿಸಿದ್ದ ಮಳೆ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಡುವು ನೀಡಿತ್ತು. ಮಧ್ಯಾಹ್ನದ ನಂತರ ಸಾಧಾರಣ ಮಳೆ ಸುರಿಯಿತು.
ಉಡುಪಿಯ ಗುಂಡಿಬೈಲು, ಬಡಗುಪೇಟೆ, ಮಠದಬೆಟ್ಟು, ಬನ್ನಂಜೆ, ಪಾಡಿಗಾರು, ಕನ್ನರ್ಪಾಡಿ, ಕರಂಬಳ್ಳಿ ಮೊದಲಾದೆಡೆ ನೆರೆ ನೀರು ಸಂಪೂರ್ಣವಾಗಿ ಇಳಿಕೆಯಾಗಿದೆ. ಪ್ರವಾಹದ ನೀರು ನುಗ್ಗಿದ್ದ ಕಾರಣ ಕೆಲವು ಮನೆಗಳೊಳಗೆ ಕೆಸರು ತುಂಬಿದ್ದು, ಅದನ್ನು ಸ್ವಚ್ಛಗೊಳಿಸಲು ಜನರು ಹರಸಾಹಸಪಟ್ಟರು.
‘ನೆರೆಯಿಂದ ಸಮಸ್ಯೆಯಾದವರಿಗಾಗಿ ಉಡುಪಿಯಲ್ಲಿ ಎರಡು ಕಡೆ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದ್ದೆವು. ಮಂಗಳವಾರ ಬೆಳಿಗ್ಗೆಯೇ ಜನ ಮನೆಗಳಿಗೆ ಮರಳಿದ್ದಾರೆ’ ಎಂದು ನಗರ ಸಭೆಯ ಪೌರಾಯುಕ್ತ ರಾಯಪ್ಪ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಮಂಗಳವಾರ ಕಡಿಮೆಯಾಗಿತ್ತು. ಬಹುತೇಕ ಕಡೆ ಸಂಜೆವರೆಗೂ ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಸಂಜೆ ಬಳಿಕ ಸಾಧಾರಣ ಮಳೆಯಾಯಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜುಲೈ 10ರಂದು ಗುಡುಗಿನಿಂದ ಕೂಡಿದ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಸಂಜೆಯ ನಂತರ ಜಡಿ ಮಳೆ ಸುರಿಯಿತು. ಕೊಟ್ಟಿಗೆಹಾರ, ಕೊಪ್ಪ, ಕಳಸ, ಎನ್.ಆರ್.ಪುರ, ಚಿಕ್ಕಮಗಳೂರು ನಗರ ಸೇರಿ ಎಲ್ಲೆಡೆ ಸಾಧಾರಣ ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.